ಮುಂದುವರಿದ ಮಳೆ: ಎಮ್ಮೆ ಮೇಯಿಸಲು ಹೋಗಿದ್ದ ರೈತ ಹಳ್ಳದಲ್ಲಿ ಬಿದ್ದು ಮೃತ್ಯು
ಚಿಕ್ಕಮಗಳೂರು: ಬಯಲುಸೀಮೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, 2025ರ ವರ್ಷಪೂರ್ತಿ ಮಳೆಗೆ ಕಾಫಿನಾಡಲ್ಲಿ 5ನೇ ಬಲಿಯಾಗಿದೆ.
ಎಮ್ಮೆ ಮೇಯಿಸಲು ಹೋಗಿದ್ದ ರೈತ ಹಳ್ಳದಲ್ಲಿ ಬಿದ್ದು ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ದೇವಗೊಂಡನ ಹಳ್ಳಿಯಲ್ಲಿ ಅ.22ರ ಬುಧವಾರ ನಡೆದಿದೆ.
ಲಕ್ಷ್ಮಣ್ ಗೌಡ (45) ಮೃತ ದುರ್ದೈವಿ. ನಿನ್ನೆ (ಅ.21ರ ಮಂಗಳುವಾರ) ಸಂಜೆಯಿಂದ ಲಕ್ಷ್ಮಣ ಗೌಡ ಅವರು ನಾಪತ್ತೆಯಾಗಿದ್ದು, ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ನಿರಂತರ ಮಳೆಯಿಂದ ಹಳ್ಳ-ಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನೀರು ಕಡಿಮೆಯಾದ ಬಳಿಕ ಮೃತದೇಹ ಪತ್ತೆಯಾಗಿದೆ.
ನಾಪತ್ತೆಯಾಗಿದ್ದ ಲಕ್ಷ್ಮಣ್ ಗೌಡನಿಗಾಗಿ ಪೋಷಕರು ಹುಡುಕಾಟ ನಡೆಸಿದ್ದರು. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




