ಕೊಚ್ಚಿ: ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕ: ತಪ್ಪಿದ ಬಾರಿ ದುರಂತ; ಅರೋಪಿ ಬಂಧನ
ಕೊಚ್ಚಿ: ಮಲೇಷ್ಯಾದ ಕೌಲಾಲಂಪುರ್ನಿಂದ ಕೇರಳದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಬಾಟಿಕ್ ಏರ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಹಾಗೂ ಅದರ ಗ್ಲಾಸ್ ಪ್ಯಾನಲ್ ಅನ್ನು ಒಡೆದುಹಾಕಿದ್ದಾನೆ.
ಗಗನಸಖಿಯರು ಹಾಗೂ ಸಹ ಪ್ರಯಾಣಿಕರ ಸಮಯಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ.
ಬುಧವಾರ ರಾತ್ರಿ ‘ಬಾಟಿಕ್ ಏರ್ OD231’ (ಬೋಯಿಂಗ್ 737) ವಿಮಾನದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಪಾಲಕ್ಕಾಡ್ ಮೂಲದ, ಪ್ರಸ್ತುತ ಶ್ರೀಮೂಲನಗರಂನಲ್ಲಿ ವಾಸಿಸುತ್ತಿರುವ 36 ವರ್ಷದ ಜಂಶೀರ್ ಅಥಣಿಕ್ಕಲ್ ಎಂದು ಗುರುತಿಸಲಾಗಿದೆ.
ವಿಮಾನವು ಕೊಚ್ಚಿಯತ್ತ ಹಾರಾಟ ನಡೆಸುತ್ತಿದ್ದಾಗ (ರಾತ್ರಿ ಸುಮಾರು 9.30 ರಿಂದ 11.05 ರ ನಡುವೆ) 12A ಸೀಟಿನಲ್ಲಿ ಕುಳಿತಿದ್ದ ಜಂಶೀರ್ ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ. ವಿಮಾನ ಆಗಸದಲ್ಲಿದ್ದಾಗಲೇ ಆತ ಕಾಲಿನಿಂದ ಒದ್ದು ಎಮರ್ಜೆನ್ಸಿ ನಿರ್ಗಮನ ಬಾಗಿಲಿನ ಗ್ಲಾಸ್ ಪ್ಯಾನಲ್ ಅನ್ನು ಪುಡಿಪುಡಿ ಮಾಡಿದ್ದಾನೆ. ಬಳಿಕ ಎಮರ್ಜೆನ್ಸಿ ಬಾಗಿಲನ್ನು ಬಲವಂತವಾಗಿ ತೆರೆಯಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಕ್ಯಾಬಿನ್ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ತಕ್ಷಣವೇ ಆತನನ್ನು ತಡೆಯಲು ಯತ್ನಿಸಿದ್ದಾರೆ.
ರಾತ್ರಿ ಸುಮಾರು 11.10 ಕ್ಕೆ ವಿಮಾನವು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ತಕ್ಷಣವೇ ವಿಮಾನ ನಿಲ್ದಾಣದಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ನೆಡುಂಬಶ್ಶೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ಪ್ರಾಥಮಿಕ ತನಿಖೆಯಲ್ಲಿ ಆತ ಮದ್ಯಪಾನ ಮಾಡಿರಲಿಲ್ಲ ಎಂಬುದು ತಿಳಿದುಬಂದಿದ್ದು, ಈ ಕೃತ್ಯ ಎಸಗಲು ನಿಜವಾದ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.




