March 22, 2026

ಶ್ರೀಕೃಷ್ಣ ಮಠವನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಮುಂದಾಗಿತ್ತು: ಪ್ರಮೋದ್ ಮಧ್ವರಾಜ್

0
pramod24dec2021.jpg

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠವನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಆಲೋಚಿಸಿತ್ತು. ಆದರೆ ಶ್ರೀ ಕೃಷ್ಣ ಮಠಕ್ಕೆ ತೊಂದರೆಯಾದರೆ ಮೊದಲು ನಾನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅಂತ ಹೇಳಿದ್ದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕೃಷ್ಣಮಠದಲ್ಲಿ ನಡೆದ ಕೃಷ್ಣಮಠದ ರಾಜಾಂಗಣದಲ್ಲಿ ಅದಮಾರು ಪರ್ಯಾಯ ಸಮಾಪನ ಕಾರ್ಯಕ್ರಮ ‘ವಿಶ್ವಾರ್ಪಣಂ’ನಲ್ಲಿ ಮಾತನಾಡಿದ ಅವರು, ಕೃಷ್ಣಮಠವನ್ನು ಸರ್ಕಾರದ ಅಧೀನಕ್ಕೆ ತರಲು ಸಿದ್ದರಾಮಯ್ಯ ಮುಂದಾಗಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದು, ಇದು ಭಾರೀ ಚರ್ಚೆ ಹುಟ್ಟುಹಾಕಿದೆ.

ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಮಠಕ್ಕೆ ಎಂಟುನೂರು ವರ್ಷಗಳ ಇತಿಹಾಸ ಇದೆ. ದೇಶವಿದೇಶಗಳಲ್ಲಿ ಭಕ್ತರನ್ನು ಹೊಂದಿರುವ ಮಠ, ಉಡುಪಿ ಜನರಿಗೊಂದು ಭಾಗ್ಯ. ನಮ್ಮದೇ ಸರ್ಕಾರ ಇದನ್ನು ವಶಪಡಿಸಲು ಮುಂದಾಗಿತ್ತು. ಆಗ ನಾನು ಮಠವನ್ನು ಮುಟ್ಟಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯನವರಿಗೆ ಹೇಳಿ ಈ ವಿಚಾರಕ್ಕೆ ಫುಲ್ ಸ್ಟಾಪ್ ಹಾಕುವ ಮೂಲಕ ಶಾಸಕನಾಗಿ ಸಣ್ಣ ಸೇವೆ ಮಾಡಿದ್ದೇನೆ ಎಂಬ ತೃಪ್ತಿ ಇದೆ ಎಂದು ಹೇಳಿ ನೆನಪಿಸಿಕೊಂಡಿದ್ದಾರೆ.

ಈ ವಿಷಯ ನನ್ನ ಒಳಗೇ ಇತ್ತು. ಇದನ್ನು ಹೇಳುವುದಿಲ್ಲ ಎಂದುಕೊಂಡಿದ್ದೆ. ಆದರೆ ಇವತ್ತು ಹೇಳಬೇಕಾಯಿತು ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆ ಅಂತರ ಕಾಯ್ದುಕೊಂಡಿರುವ ಪ್ರಮೋದ್ ಮಧ್ವರಾಜ್, ಪದ್ಮ ಪ್ರಶಸ್ತಿ ನೀಡುವ ಸಂದರ್ಭ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದರು.

ದ್ವೈತ ಸಿದ್ದಾಂತಿ ಶ್ರೀ ಮಧ್ವಾಚಾರ್ಯರು 800 ವರ್ಷಗಳ ಹಿಂದೆ ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಸ್ಥಾಪಿಸಿದ್ದರು. ಶ್ರೇಷ್ಠ ಸಂಪ್ರದಾಯದ ಎಂಟು ಮಠಗಳನ್ನು ಹೊಂದಿರುವ ನಾವು ಉಡುಪಿಯ ನಿವಾಸಿಗಳಾಗಿರುವುದು ನಮ್ಮ ಅದೃಷ್ಟ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!