“ಆಕೆ ಕೊಲೆಯಾದ ರಾತ್ರಿ ನಾನು ಎಲ್ಲಿದ್ದೇನೆ ಎಂದು ಕೇಳಿ ಕರೆ ಬಂದಿತ್ತು.. ಮರುದಿನ, ನಾನು ಕೊಲೆಯಾದ ಹುಡುಗಿಯ ಶವವನ್ನು ನೋಡಿದೆ: ಅನಾಮಿಕ ಮಾಸ್ಕ್ ಮ್ಯಾನ್ ಸ್ಪೋಟಕ ಹೇಳಿಕೆ
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಹೇಳಿದ ಇಡೀ ದೇಶದಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಅನಾಮಿಕ ಮಾಸ್ಕ್ ಮ್ಯಾನ್ ಇದೇ ಮೊದಲ ಬಾರಿಗೆ ಮಾದ್ಯಮವೊಂದಕ್ಕೆ ಸಂದರ್ಶನ ನೀಡಿದ್ದು. ಅದರಲ್ಲಿ ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾನೆ. ಧರ್ಮಸ್ಥಳ ಗ್ರಾಮದಲ್ಲಿ ನಾನು ಶವಗಳನ್ನು ಹೂತಿದ್ದು ನಿಜ. ಅದರಲ್ಲಿ ಅನುಮಾನವೇ ಇಲ್ಲ. ಈಗ ಮಣ್ಣಿನೊಳಗೆ ಶವದ ಕುರುಹುಗಳು ಸಿಗದೇ ಇದ್ದಲ್ಲಿ ಅದಕ್ಕೆ ನಾನು ಹೊಣೆಗಾರನಲ್ಲ” ಎಂದು, ನೂರಾರು ಶವಗಳನ್ನು ಹೂತ ಪ್ರಕರಣದ ಸಾಕ್ಷಿ ದೂರುದಾರನಾದ ಅನಾಮಿಕ ವ್ಯಕ್ತಿ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿ ‘ಇಂಡಿಯಾ ಟುಡೇ’ ಜೊತೆ ಮಾತನಾಡಿರುವ ಮುಸುಕುದಾರಿ, ‘ಅಂತ್ಯಕ್ರಿಯೆಗಳಿಗೆ ಯಾವುದೇ ಸ್ಮಶಾನಗಳನ್ನು ಬಳಸಲಾಗುತ್ತಿರಲ್ಲ. ನಾವು ಕಾಡುಗಳಲ್ಲಿ, ಹಳೆಯ ರಸ್ತೆ ಬದಿಗಳಲ್ಲಿ, ನದಿ ದಂಡೆಗಳ ಬಳಿ ಶವಗಳನ್ನು ಹೂಳುತ್ತಿದ್ದೆವು’ ಎಂದು ಹೇಳಿದ್ದಾನೆ.
ಬಾಹುಬಲಿ ಬೆಟ್ಟಗಳಲ್ಲಿ ಸಮಾಧಿ ಮಾಡಲಾದ ಮಹಿಳೆ ಸೇರಿದಂತೆ ನೇತ್ರಾವತಿ ಸ್ನಾನ ಘಟ್ಟದ ಬಳಿ ಸುಮಾರು 70 ಶವಗಳನ್ನು ಹೂತಿರುವುದಾಗಿ ಮುಸುಕುದಾರಿ ಹೇಳಿಕೊಂಡಿದ್ದಾನೆ. ಅಂತೆಯೇ ಎಸ್ ಐಟಿ ತನಿಖೆ ವೇಳೆ ಗುರುತಿಸಲಾದ Spot 13 ಎಂದು ಕರೆಯಲ್ಪಡುವ ಒಂದು ಸ್ಥಳವನ್ನು ಹೈಲೈಟ್ ಮಾಡಿರುವ ಮುಸುಕುದಾರಿ, ಇಲ್ಲಿ ಸುಮಾರು 70 ರಿಂದ 80 ಶವಗಳನ್ನು ಹೂಳಲಾಗಿದೆ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.
ಶವ ಹೂಳುವಾಗ ಇದ್ದ ಪ್ರದೇಶದ ಸ್ಚರೂಪದಲ್ಲಿ ಈಗ ಕೆಲವು ಬದಲಾವಣೆ ಆಗಿದೆ. ಆಗ ಕಡಿಮೆ ಮರಗಳಿದ್ದಲ್ಲಿ ಈಗ ದಟ್ಟ ಮರಗಳಿವೆ. ಅಲ್ಲೆಲ್ಲ ಸ್ಥಳ ತೋರಿಸುವಾಗ ಸ್ವಲ್ಪ ಆಚೀಚೆ ಆಗಿರಲೂಬಹುದು. ಆದರೆ ಎಲ್ಲ ಕಡೆ ಅಗೆಯಲು ದಟ್ಟ ಅರಣ್ಯವಿರುವ ಕಾರಣ ಅಡ್ಡಿಯಾಗುತ್ತಿದೆ. ಕೆಲವು ಕಡೆ ಮಣ್ಣು ಕುಸಿದಿದೆ. ಅಂದು ನಾನು ಶವಗಳನ್ನು ಹೂಳುತ್ತಿರುವಾಗ ನನ್ನ ಜತೆ ಗ್ರಾಮ ಪಂಚಾಯಿತಿ ಕಡೆಯವರು ಯಾರೂ ಇರುತ್ತಿರಲಿಲ್ಲ. ಶವ ಹೂಳಲು ನನಗೆ ಮಾಹಿತಿ ಕಚೇರಿಯಿಂದ ಆದೇಶ ಬರುತ್ತಿತ್ತು. ಅದನ್ನು ನಾನು ಮಾಡುತ್ತಿದ್ದೆ,” ಎಂದು ತಿಳಿಸಿದರು.
ಇನ್ನು ಸೌಜನ್ಯ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ದೂರುದಾರ “ಆಕೆ ಕೊಲೆಯಾದ ರಾತ್ರಿ ನಾನು ಎಲ್ಲಿದ್ದೇನೆ ಎಂದು ಕೇಳುತ್ತಾ ನನಗೆ ಕರೆ ಬಂತು. ನಾನು ರಜೆಯ ಮೇಲೆ ನನ್ನ ಊರಿನಲ್ಲಿದ್ದೇನೆ ಎಂದು ಹೇಳಿದೆ. ರಜೆಯ ಮೇಲೆ ಬಂದಿದ್ದಕ್ಕಾಗಿ ಅವರು ನನ್ನನ್ನು ಕೂಗಾಡಿದ್ದಾರೆ. ಮರುದಿನ, ನಾನು ಕೊಲೆಯಾದ ಹುಡುಗಿಯ ಶವವನ್ನು ನೋಡಿದೆ” ಎಂದು ಅವರು ನೆನಪಿಸಿಕೊಂಡರು.




