ಮಹಿಳಾ ಕೌನ್ಸಿಲರನ್ನು ಚಾಕುವಿನಿಂದ ಇರಿದು ಕೊಲೆಗೈದ ಪತಿ
ಚೆನ್ನೈ: ಮಹಿಳಾ ಕೌನ್ಸಿಲರ್ ಓರ್ವರನ್ನು ಪತಿಯೇ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ತಮಿಳುನಾಡಿನ ಅವಡಿ ಜಿಲ್ಲೆಯಲ್ಲಿ ನಡೆದಿದೆ.
ಪತಿಯಿಂದ ಹತ್ಯೆಗೊಳಗಾದ ಮಹಿಳಾ ಕೌನ್ಸಿಲರ್ನ್ನು ಗೋಮತಿ ಎಂದು ಗುರುತಿಸಲಾಗಿದ್ದು, ಕೌನ್ಸಿಲರ್ ಗೋಮತಿ ಹತ್ಯೆಯ ಆರೋಪಿತ ಪತಿ ಸ್ಟೀಫನ್ ರಾಜ್ ಎಂದು ತಿಳಿದು ಬಂದಿದೆ.
ಸ್ಟೀಫನ್ ರಾಜ್ ವಿಸಿಕೆ ಪಕ್ಷದ ತಿರುನಿರುವೂರು ನಗರ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಕೌನ್ಸಿಲರ್ ಗೋಮತಿ ಹಾಗೂ ಅವರ ಪತಿ ಸ್ಟೀಫನ್ ರಾಜ್ ನಡುವೆ ವಯಕ್ತಿಕ ಕಾರಣದಿಂದ ಜಗಳ ಪ್ರಾರಂಭವಾಗಿದೆ.
ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸಿಟ್ಟಿನ ಭರದಲ್ಲಿ ಕೌನ್ಸಿಲರ್ ಗೋಮತಿ ಮೇಲೆ ಅವರ ಪತಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ರಸ್ತೆ ಮಧ್ಯದಲ್ಲಿ ನಡೆದ ದಾಳಿಯಲ್ಲಿ ಕೌನ್ಸಿಲರ್ ಗೋಮತಿ ಅವರ ತಲೆ, ಮುಖ ಮತ್ತು ಕುತ್ತಿಗೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತೀವ್ರ ಗಾಯಗಳಾಗಿದ್ದು, ಗೋಮತಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.




