ಕಾಸರಗೋಡು: ವಿದ್ಯಾರ್ಥಿನಿ ಹತ್ಯೆಗೈದು ನದಿಗೆ ಎಸೆದ ಪ್ರಕರಣ: 15 ವರ್ಷಗಳ ಬಳಿಕ ಆರೋಪಿಯ ಬಂಧನ
ಕಾಸರಗೋಡು: ರಾಜಾಪುರ ಎಣ್ಣಪ್ಪಾರದ ವಿದ್ಯಾರ್ಥಿನಿಯನ್ನು ಕೊಲೆಗೈದು ನದಿಗೆಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹದಿನೈದು ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಾಣತ್ತೂರಿನ ಬಿಜು ಪೌಲೋಸ್ ಬಂಧಿತ ಆರೋಪಿ. ಮಡಿಕೇರಿಯಲ್ಲಿ ಈತನನ್ನು ಬಂಧಿಸಲಾಗಿದೆ. ಕಾಞಾಂಗಾಡ್ನ ಟಿ.ಟಿ.ಸಿ ತರಬೇತಿ ಕೇಂದ್ರಕ್ಕೆ ತೆರಳುತ್ತಿದ್ದ ರೇಷ್ಮಾ ಎಂಬ ವಿದ್ಯಾರ್ಥಿನಿ 2010 ರ ಜೂನ್ 6 ರಂದು ನಾಪತ್ತೆಯಾಗಿದ್ದಳು. ಈ ಬಗ್ಗೆ ಮನೆಯವರು ಅಂಬಲತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ತನಿಖೆ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನಲೆಯಲ್ಲಿ ಮನೆಯವರು ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ಹೈಕೋರ್ಟ್ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಿ ಆದೇಶ ನೀಡಿತ್ತು. ಕ್ರೈಂ ಬ್ರಾಂಚ್ ಪೊಲೀಸರು ಬಿಜು ಪೌಲೋಸ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ರೇಷ್ಮಾಳನ್ನು ಕೊಲೆಗೈದು ನದಿಗೆ ಎಸೆದಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಈ ಹಿನ್ನಲೆಯಲ್ಲಿ ಹೊಳೆಯಲ್ಲಿ ಶೋಧ ನಡೆಸಿದರೂ ಮೃತದೇಹ ಪತ್ತೆಯಾಗಲಿಲ್ಲ. ಹೊಳೆಯಿಂದ ಲಭಿಸಿದ ಎಲುಬು ಡಿ ಎನ್ ಎ ಪರೀಕ್ಷೆ ನಡೆಸಿದಾಗ ರೇಷ್ಮಾಳದ್ದು ಎಂದು ತಿಳಿದು ಬಂದಿದೆ. ಬಾಲಕಿಯ ಅತ್ಯಾಚಾರ ನಡೆಸಿರುವುದಾಗಿ ಈತ ತಪ್ಪೊಪ್ಪಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





