ಶಾಸಕ ಜನಾರ್ದನ ರೆಡ್ಡಿ ಚಂಚಲಗುಡ ಜೈಲಿಗೆ ಶಿಫ್ಟ್: ಶಿಕ್ಷೆಯನ್ನು ಪ್ರಮಾಣವನ್ನು ಕಡಿತಗೊಳಿಸಲು ಅಂಗಾಲಾಚಿದ ರೆಡ್ಡಿ
ಹೈದರಾಬಾದ್: ಓಬಳಾಪುರಂ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಏಳು ವರ್ಷಗಳ ಕಾಲ ಶಿಕ್ಷೆ ಪ್ರಕಟಿಸಿದೆ. ಕೋರ್ಟ್ ನಲ್ಲಿ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು, ಸಿಬಿಐ ಜನಾರ್ದನ ರೆಡ್ಡಿ ಅವರನ್ನು ಚಂಚಲಗುಡ ಜೈಲಿಗೆ ಶಿಫ್ಟ್ ಮಾಡಿದೆ.
ಯಡಿಯೂರಪ್ಪ ಆಡಳಿತದಲ್ಲಿ ಈ ಒಂದು ಅಕ್ರಮ ಗಣಿಗಾರಿಕೆ ನಡೆದಿತ್ತು. ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಭಾಗದ ಓಬಳಾಪುರಂ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರಕರಣ ಇದಾಗಿದ್ದು, ಶ್ರೀನಿವಾಸ ರೆಡ್ಡಿ, ಒಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಶಾಸಕ ಜನಾರ್ದನ ರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು.
ಈ ಕಂಪನಿಗೆ ಗಣಿಗಾರಿಕೆ ಮಂಜೂರಾತಿ ನೀಡುವಲ್ಲಿ ಅಕ್ರಮ ಎಸಗಲಾಗಿದೆ. ಅರಣ್ಯ ಇಲಾಖೆ ಮತ್ತು ಗಣಿ ಇಲಾಖೆಯಿಂದಲೂ ಅಕ್ರಮ ನಡೆದಿತ್ತು. ಇದೀಗ ದೆಹಲಿಯ ಸಿಬಿಐ ವಿಶೇಷ ಕೋರ್ಟ್ ಶಾಸಕ ಜನಾರ್ಧನ ರೆಡ್ಡಿಗೆ 7 ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಿದೆ ಇದರ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಇದೀಗ ಶಾಸಕ ಜನಾರ್ದನ ರೆಡ್ಡಿಯನ್ನು ಪೊಲೀಸರು ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ಜನಾರ್ಧನ ರೆಡ್ಡಿ ಸೇರಿದಂತೆ ಮೂವರು ಅಪರಾಧಿಗಳು ಜೈಲಿಗೆ ಶಿಫ್ಟ್ ಆಗಿದ್ದಾರೆ, ನಾಂಪಲ್ಲಿ ಕೋರ್ಟ್ ನಿಂದ ಚಂಚಲಗುಡ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿದ್ದಾರೆ. ಭದ್ರತೆಯ ನಡುವೆ ಜನಾರ್ಧನ ರೆಡ್ಡಿಯನ್ನು ಪೊಲೀಸರು ಜೈಲಿಗೆ ಸ್ಥಳಾಂತರಿಸಿದ್ದಾರೆ.
ಶಿಕ್ಷೆಯನ್ನು ಕಡಿತಗೊಳಿಸಲು ಮನವಿ:
ಒಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತಾನು ಈಗಾಗಲೇ ಮೂರು ವರ್ಷ ಜೈಲು ವಾಸ ಅನುಭವಿಸಿದ್ದು, ತನಗೆ ಈಗ ವಿಧಿಸಲಾಗಿರುವ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಕಡಿಮೆಗೊಳಿಸಬೇಕೆಂದು ಕೋರಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮನವಿಯನ್ನು ಸಿಬಿಐ ನ್ಯಾಯಾಲಯ ತಳ್ಳಿಹಾಕಿದೆ.
ತನ್ನ ವಯಸ್ಸು ಹಾಗೂ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಜೈಲು ಶಿಕ್ಷೆಯನ್ನು ಕಡಿತಗೊಳಿಸುವಂತೆ ಅವರು ಮನವಿ ಮಾಡಿದ್ದರು. ತಾನು ಗಂಗಾವತಿ ಕ್ಷೇತ್ರದಿಂದ ಭಾರೀ ಬಹುಮತದಿಂದ ಶಾಸಕನಾಗಿ ಆಯ್ಕೆಯಾಗಿರುವುದು ಸಾರ್ವಜನಿಕ ಸೇವೆಗೆ ತಾನು ಸಮರ್ಪಿತನಾಗಿರುವುದನ್ನು ಬಿಂಬಿಸುತ್ತದೆ. ಆದುದರಿಂದ ತನ್ನ ಜೈಲು ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಜನಾರ್ದನ ರೆಡ್ಡಿ ನ್ಯಾಯಾಲಯವನ್ನು ಕೋರಿದ್ದರು.
ಆದರೆ ಇದನ್ನು ತಿರಸ್ಕರಿಸಿದ ನ್ಯಾಯಾಲಯವು, ” ಹಾಗೆ ನೋಡಿದರೆ ನಿಮಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಬೇಕಿತ್ತು. ನೀವು ಎಸಗಿದ ಅಪರಾಧಕ್ಕೆ ನೀವು ಜೀವಾವಧಿ ಶಿಕ್ಷೆಗೆ ಅರ್ಹರಾಗಬೇಕಿತ್ತು ” ಎಂದು ಕಟುವಾಗಿ ಹೇಳಿದೆ.




