ನಾಳೆಯಿಂದ(ಮಂಗಳವಾರ) ವಾರದ ಸಂತೆ ಪುರಭವನ ಹಿಂಬದಿಯ ಖಾಲಿ ಜಾಗಕ್ಕೆ ಶಿಫ್ಟ್: ನಾಳೆಯಿಂದ ನಿಗದಿಪಡಿಸಿದ ಸ್ಥಳದಲ್ಲಿ ಸಂತೆ ನಡೆಸಲು ಮುಖ್ಯಾಧಿಕಾರಿ ಸೂಚನೆ
ವಿಟ್ಲ: ಪೇಟೆಯಿಂದ ಪೊನ್ನೊಟ್ಟುವಿಗೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಸಂತೆದಿನ ವ್ಯಾಪಾರ ನಡೆಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಅದನ್ನು ಪಟ್ಟಣ ಪಂಚಾಯತ್ ಅಧಿನದ ಪುರಭವನದ ಹಿಂಭಾಗದಲ್ಲಿರುವ ಖಾಲಿ ಜಾಗಕ್ಕೆ ಶಿಫ್ಟ್ ಮಾಡಲಾಗುವುದು ಎಂದು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ವಿ.ರವರು ತಿಳಿಸಿದ್ದಾರೆ.
ವಿಟ್ಲ ಪಟ್ಟಣ ಪಂಚಾಯತ್ ವತಿಯಿಂದ ಇದುವರೆಗೆ ಪೊನ್ನೊಟ್ಟುವಿಗೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ವಾರದ ಸಂತೆ ನಡೆಯುತ್ತಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದ ವಿಟ್ಲ ಪಟ್ಟಣ ಪಂಚಾಯತ್ ನಿಯೋಗ ಪರಿಶೀಲನೆ ನಡೆಸಿತ್ತು.
ಇದೀಗ ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಪಟ್ಟಣ ಪಂಚಾಯತ್ ಅಧಿನದ ಪುರಭವನದ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ವಾರದ ಸಂತೆ ನಡೆಸಲು ಗುರುತಿಸಲಾಗಿದ್ದು, ಅಲ್ಲಿಗೆ ಭೇಟಿ ನೀಡಿದ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟು ಹಾಗೂ ಮುಖ್ಯಾಧಿಕಾರಿ ಕರುಣಾಕರ ವಿ.ರವರ ನೇತೃತ್ವದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಜ.೭ ರಿಂದ ಎಲ್ಲಾ ಸಂತೆ ವ್ಯಾಪಾರಸ್ಥರು ಸದ್ರಿ ಸ್ಥಳದಲ್ಲಿ ಐಟಂವಾರ್ ನಿಗದಿಪಡಿಸಿದ ಸ್ಥಳದಲ್ಲಿ ವಾರದ ಸಂತೆ ವ್ಯಾಪಾರ ನಡೆಸುವಂತೆ ಅವರು ಮನವಿ ಮಾಡಿದ್ದಾರೆ.




