ಯುವಕ-ಯುವತಿಯರಿಗೆ 18-21 ವರ್ಷಕ್ಕೆ ವಿವಾಹ ಮಾಡಿಸಬೇಕು: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಬೆಂಗಳೂರು: ‘ಹವ್ಯಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಸಮುದಾಯದ ಯುವಕ-ಯುವತಿಯರಿಗೆ 18-21 ವರ್ಷಕ್ಕೆ ವಿವಾಹ ಮಾಡಿಸಬೇಕು. ಹವ್ಯಕ ಸಂತತಿ ವೃದ್ಧಿಗೆ ಕನಿಷ್ಠ ಮೂರು ಮಕ್ಕಳನ್ನಾದರೂ ಪಡೆಯಬೇಕು. ಮೂರಕ್ಕಿಂತ ಹೆಚ್ಚು ಮಕ್ಕಳಿದ್ದರೆ ನಮ್ಮ ಮಠಕ್ಕೆ ನೀಡಬಹುದು’ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಅಖಿಲ ಹವ್ಯಕ ಮಹಾಸಭಾ ಇಲ್ಲಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ನಡೆದ ಸಹಸ್ರಚಂದ್ರ ಸಭೆಯಲ್ಲಿ ಸಾನ್ನಿಧ್ಯ ವಹಿಸಿ, ಮಾತನಾಡಿದರು.
‘ಜನಸಂಖ್ಯೆ ಕುಸಿತ ಹಾಗೂ ಸಂಸ್ಕೃತಿಯ ತೀವ್ರ ಹಿನ್ನಡೆ, ನೈತಿಕತೆ ಪತನದಂತಹ ಸಮಸ್ಯೆಗಳನ್ನು ಹವ್ಯಕ ಸಮುದಾಯವೂ ಎದುರಿಸುತ್ತಿದೆ. ಹವ್ಯಕ ಸಮುದಾಯವು ಸುಟ್ಟ ಮನೆಯಂತೆ ಜ್ವಲಿಸುತ್ತಿದೆ. ಈ ಬೆಂಕಿ ಆರಿಸಲು ನೀರು ಸಾಲುತ್ತಿಲ್ಲ. ಯುವಕ-ಯುವತಿಯರು ಧರ್ಮಸಮ್ಮತವಲ್ಲದ ವಿಧಾನದಿಂದ ಶರೀರ ಮತ್ತು ಮನಸ್ಸಿನ ಅಪೇಕ್ಷೆ ಪೂರೈಸಿಕೊಳ್ಳುತ್ತಿದ್ದಾರೆ. ಅದಕ್ಕೆ ಆಧುನಿಕ ವಿಜ್ಞಾನ ಸಮ್ಮತಿ ಸೂಚಿಸುತ್ತಿದೆ. ಈ ವಿಜ್ಞಾನವು ಅಧರ್ಮದ ಮಾರ್ಗದಲ್ಲಿ ಸಾಗುವ ದಾರಿ ತೋರಿಸುತ್ತಿದೆ. ಈ ಮಾರ್ಗದಿಂದ ರೋಗಿಯಾದರೆ ಅದಕ್ಕೆ ಔಷಧವಿದೆ ಎನ್ನುತ್ತದೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ 18 ವರ್ಷಕ್ಕೆ ಹಾಗೂ ಗಂಡು ಮಕ್ಕಳಿಗೆ 21 ವರ್ಷಕ್ಕೆ ವಿವಾಹ ಮಾಡಿಸುವುದೇ ಪರಿಹಾರೋಪಾಯ’ ಎಂದರು.