ಕೇರಳದ ಪದ್ಮನಾಭಸ್ವಾಮಿ ದೇವಾಯಲಕ್ಕೆ ನೋಟಿಸ್ ಜಾರಿ: ₹1.5 ಕೋಟಿ ತೆರಿಗೆ ಬಾಕಿ
ತಿರುವನಂತಪುರಂ: ಕಳೆದ ಏಳು ವರ್ಷಗಳಿಂದ 1.57 ಕೋಟಿ ತೆರಿಗೆ ಬಾಕಿ ಪಾವತಿಸುವಂತೆ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಕೇಂದ್ರ ಜಿಎಸ್ಟಿ ಇಲಾಖೆ ನೋಟಿಸ್ ಜಾರಿ ಮಾಡಿದೆ.
₹1.57 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರದಲ್ಲಿರುವ ಪದ್ಮನಾಭಸ್ವಾಮಿ ದೇವಾಯಲಕ್ಕೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಇಲಾಖೆ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
ಭಕ್ತರಿಗೆ ಸಾಂಪ್ರದಾಯಿಕ ಉಡುಪುಗಳನ್ನು ಬಾಡಿಗೆಗೆ ನೀಡುವುದು ಮತ್ತು ವಿವಿಧ ವಸ್ತುಗಳ ಮಾರಾಟದಂತಹ ವಿವಿಧ ಸೇವೆಗಳನ್ನು ಉಲ್ಲೇಖಿಸಿ ಕಳೆದ ಏಳು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಜಿಎಸ್ಟಿ ಇಲಾಖೆಯು ತೆರಿಗೆ ಬಾಕಿಯನ್ನು ಲೆಕ್ಕಾಚಾರ ಮಾಡುವಾಗ ಧಾರ್ಮಿಕ ಕೇಂದ್ರಗಳಿಗೆ ನೀಡಲಾಗುವ ವಿವಿಧ ವಿನಾಯಿತಿಗಳನ್ನು ಪರಿಗಣಿಸಿಲ್ಲ. ಹಾಗಾಗಿ ಜಿಎಸ್ಟಿ ಇಲಾಖೆಯ ಕ್ರಮದ ವಿರುದ್ಧ ಈಗಾಗಲೇ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ದೇವಾಲಯದ ಆದಾಯ ತೆರಿಗೆ ಕೇವಲ ₹16 ಲಕ್ಷದಷ್ಟಿದೆ. ಆ ಮೊತ್ತದ ಜಿಎಸ್ಟಿಯನ್ನು ಈಗಾಗಲೇ ಪಾವತಿಸಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. ಈ ಸಂಬಂಧ ಜಿಎಸ್ಟಿ ಅಧಿಕಾರಿಗಳು ಈ ಹಿಂದೆ ದೇವಸ್ಥಾನದ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದರು. ಸಮಿತಿಯಿಂದ ಮೊತ್ತ ಪಾವತಿಸದಿದ್ದರೆ ಶೇ 100 ದಂಡ ಹಾಗೂ ಶೇ 18ರಷ್ಟು ದಂಡದ ಬಡ್ಡಿ ಪಾವತಿಸಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.





