February 3, 2026

ಉಪ್ಪಿನಂಗಡಿ ಲಾಠಿಚಾರ್ಜ್ ಪ್ರಕರಣ:
ಡಿ. 17ರಂದು ಎಸ್ಪಿ ಕಛೇರಿ ಚಲೋ: ಪಿ ಎಫ್ ಐ

0
IMG-20211215-WA0008.jpg

ಮಂಗಳೂರು: ಉಪ್ಪಿನಂಗಡಿಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿರುವುದನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಡಿ.17ರಂದು ಎಸ್ಪಿ ಕಛೇರಿ ಚಲೋ ನಡೆಸಲು ನಿರ್ಧರಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಪೊಲೀಸರು ವಿನಾಕಾರಣ ನಮ್ಮ ಮೂವರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಕೇಳಿದರೆ, ನೀವು ಆರೋಪಿಗಳನ್ನು ತಂದುಕೊಡಿ, ನಾವು ಬಿಡುತ್ತೇವೆ ಎನ್ನುತ್ತಿದ್ದರು. ಹಾಗಾದರೆ, ಇವರು ಆರೋಪಿಗಳು ಅಲ್ಲ ಎಂದಿದ್ದರೆ ಯಾಕೆ ಬಂಧನ ಮಾಡಿದ್ದೀರಿ ಎಂದು ಪ್ರಶ್ನಿಸಿ, ಪ್ರತಿಭಟನೆ ನಡೆಸಿದ್ದೇವೆ. ಯಾವುದೇ ಸಾಕ್ಷ್ಯ ಇಲ್ಲದಿದ್ದರೂ, ವಶಕ್ಕೆ ಪಡೆದಿದ್ದರು. ಸುಳ್ಳು ಕೇಸಿನಲ್ಲಿ ಸಿಲುಕಿಸುವ ಸೂಚನೆ ಸಿಕ್ಕಿದ್ದರಿಂದ ಪ್ರತಿಭಟನೆ ನಡೆಸಿದ್ದೇವೆ.

ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ, ನಮ್ಮ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಪೊಲೀಸರು ಸಾಮಾನ್ಯವಾಗಿ ಕಾಲಿಗೆ ಏಟು ಕೊಟ್ಟು ಲಾಠಿಚಾರ್ಜ್ ನಡೆಸುವುದು ಸಾಮಾನ್ಯ. ಆದರೆ, ಇವರು ನಮ್ಮ ಕಾರ್ಯಕರ್ತರ ತಲೆಯನ್ನು ಗುರಿಯಾಗಿರಿಸಿ ಹಲ್ಲೆ ಮಾಡಿದ್ದಾರೆ. ಪೊಲೀಸರು ಕೈಯಲ್ಲಿ ಏನು ಹಿಡಿದುಕೊಂಡಿದ್ದರೋ, ಗೊತ್ತಿಲ್ಲ. ನಮ್ಮ 40ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಗಂಭೀರ ಹಲ್ಲೆಯಾಗಿದೆ. ಲಾಠಿ ಬದಲು ಮಾರಕಾಸ್ತ್ರ ಹಿಡಿದಿರುವ ಸಂಶಯ ಬರುತ್ತದೆ. ವಿನಾಕಾರಣ ಹಲ್ಲೆ ನಡೆಸಿರುವ ಮತ್ತು ಇದಕ್ಕೆ ಕಾರಣವಾಗಿರುವ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿದರು.

ಘಟನೆಗೆ ಸಂಬಂಧಿಸಿ ಯಾರು ತಪ್ಪು ಮಾಡಿದ್ದಾರೆ, ಅವರನ್ನು ಬಂಧಿಸಲಿ. ನಮ್ಮ ತಕರಾರಿಲ್ಲ. ಆದರೆ ಯಾರದೋ ರಾಜಕೀಯ ಒತ್ತಡಕ್ಕೆ ಮಣಿದು ಅಮಾಯಕರನ್ನು ಸುಳ್ಳು ಕೇಸು ಹಾಕಿ ಬಂಧಿಸುವುದನ್ನು ನಾವು ಖಂಡಿಸುತ್ತೇವೆ. ನಮ್ಮ ಸಮುದಾಯದ ಧಾರ್ಮಿಕ ಮುಖಂಡ ಉಲೆಮಾ ಕೂಡ ಪ್ರತಿಭಟನೆಗೆ ಬಂದಿದ್ದರು. ಆದರೆ, ಅವರಿಗೂ ಉಲೆಮಾ ಅನ್ನುವುದನ್ನು ನೋಡದೆ ತಲೆಗೆ ಬಡಿದಿದ್ದಾರೆ. ಪೊಲೀಸರು ನಮ್ಮ ಸಮುದಾಯವನ್ನು ಗುರಿಯಾಗಿರಿಸಿ ಈ ರೀತಿ ವರ್ತಿಸಿದ್ದಾರೆ.

ಈ ಹಿಂದೆ ಸುಳ್ಯದಲ್ಲಿ ಎಸ್ಐಯನ್ನು ಬಜರಂಗದಳ ಕಾರ್ಯಕರ್ತರು ನಿಂದಿಸಿ, ತಾಕತ್ತಿದ್ದರೆ ಹೊರಗೆ ಬಾ ನೋಡಿಕೊಳ್ಳುತ್ತೇವೆ ಎಂದು ಧಮಕಿ ಹಾಕಿದ್ದರು. ಆಗ ಯಾಕೆ ಪೊಲೀಸರು, ಅವರನ್ನು ಬಂಧಿಸಿಲ್ಲ. ಡೀಸಿಯ ಕೊರಳು ಪಟ್ಟಿ ಹಿಡಿಯುವುದಾಗಿ ಬಹಿರಂಗ ಬೆದರಿಕೆ ಹಾಕಿದರೂ ಆರೋಪಿಯನ್ನು ಬಂಧಿಸಲು ಮುಂದಾಗಿಲ್ಲ. ಪೊಲೀಸರು ತಮ್ಮ ದುಷ್ಕೃತ್ಯವನ್ನು ಮರೆಮಾಚಲು ಚೂರಿ ಇರಿತದ ಕತೆ ಕಟ್ಟುತ್ತಿದ್ದಾರೆ. ಲಾಠಿಚಾರ್ಜ್ ಬಳಿಕವೂ ಎಸ್ಐ ಪ್ರಸನ್ನ ಅಲ್ಲಿಯೇ ಇದ್ದರು. ಯಾರು ಕೂಡ ಹಲ್ಲೆ ಮಾಡಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯ ಸಿಸಿಟಿವಿ ನೋಡಲಿ ಎಂದು ಎ.ಕೆ.ಅಶ್ರಫ್ ಹೇಳಿದರು. ಪೊಲೀಸರು ವಶಕ್ಕೆ ಪಡೆದಿರುವ ನಮ್ಮ ಕಾರ್ಯಕರ್ತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು. ರಾಜಕೀಯ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಘಟನೆಯನ್ನು ಖಂಡಿಸಿ, ಎಸ್ಪಿ ಕಚೇರಿ ಚಲೋ ಹಮ್ಮಿಕೊಂಡಿದ್ದೇವೆ. ಜಿಲ್ಲೆಯ ಎಲ್ಲ ಕಡೆಗಳಿಂದಲೂ ನಮ್ಮ ಕಾರ್ಯಕರ್ತರು ಬರಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಿಎಫ್ಐ ಇಜಾಜ್ ಅಹ್ಮದ್, ಮಂಗಳೂರು ನಗರ ಘಟಕದ ಅಧ್ಯಕ್ಷ ಖಾದರ್ ಕುಳಾಯಿ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಜಾಬಿರ್ ಅರಿಯಡ್ಕ ಇದ್ದರು.

Leave a Reply

Your email address will not be published. Required fields are marked *

error: Content is protected !!