ಬೈಕ್ ಗೆ ಹಿಂದಿನಿಂದ ಮಿನಿಗೂಡ್ಸ್ ವಾಹನ ಢಿಕ್ಕಿ: ಪಿಗ್ಮಿ ಸಂಗ್ರಹಗಾರ ಮೃತ್ಯು
ಕುಣಿಗಲ್: ಬೈಕ್ ಗೆ ಹಿಂದಿನಿಂದ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಕೋತ್ತಗೆರೆ ಮಾತೃಶ್ರೀ ಕಲ್ಯಾಣ ಮಂಟಪದ ಎದುರು ಶುಕ್ರವಾರ(ಅ. 11) ರಂದು ನಡೆದಿದೆ.
ಕೋತ್ತಗೆರೆ ವಾಸಿ ನಾಗರಾಜು (44) ಮೃತ ದುರ್ದೈವಿ. ಪಟ್ಟಣದ ವಾಸವಿ ಬ್ಯಾಂಕ್ ನಲ್ಲಿ ಪಿಗ್ಮಿ ಸಂಗ್ರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜು ಶುಕ್ರವಾರ ಎಂದಿನಂತೆ ಪಿಗ್ಮಿ ವಸೂಲಿಗಾಗಿ ಕೊತ್ತಗೆರೆ ಗ್ರಾಮದಿಂದ ಕುಣಿಗಲ್ ಕಡೆಗೆ ಬರುತ್ತಿರಬೇಕಾದರೆ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಬರುತ್ತಿದ್ದ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಗರಾಜು ತೀವ್ರವಾಗಿ ಗಾಯಗೊಂಡರು, ಪಟ್ಟಣದ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ನೆಲಮಂಗಲ ಸಮೀಪ ಮೃತಪಟ್ಟಿದ್ದಾರೆ.
ಕುಣಿಗಲ್ ಪೊಲೀಸ್ ಠಾಣೆಯ ಸಿಪಿಐ ನವೀನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




