ಪತಿಯ ಮನೆಯ ಬಳಿಯೇ ಮಗಳ ಅಂತ್ಯ ಸಂಸ್ಕಾರ ಕುಟುಂಬಸ್ಥರು: ಏನಿದು ಪ್ರಕರಣ ಗೊತ್ತೇ?
ಕೋಲಾರ: ವರದಕ್ಷಿಣೆ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ ಪೋಷಕರು ಮಗಳ ಮೃತದೇಹವನ್ನು ಮಗಳ ಪತಿಯ ಮನೆಯ ಬಳಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿದೆ.
ಕೋಲಾರದ ಸಹಕಾರ ನಗರದಲ್ಲಿ ಈ ಘಟನೆ ನಡೆದಿದ್ದು, ನವ ವಿವಾಹಿತೆ ಮಾನಸ(24) ಆತ್ಮಹತ್ಯೆ ಮಾಡಿಕೊಂಡಿದ್ದರು. ‘ನನ್ನ ಸಾವಿಗೆ ಯಾರೂ ಕಾರಣರಲ್ಲ.. ನನ್ನ ಜೀವನ ಉಲ್ಲಾಸ್ ಕುಟುಂಬದಿಂದ ಮುಗಿದಿದೆ. ದಯವಿಟ್ಟು ನನ್ನ ಒಡವೆಯನ್ನು ನನ್ನ ಮನೆಗೆ ವಾಪಸ್ ಮಾಡಿ ಧನ್ಯವಾದಗಳು’ ಎಂದು ಮಾನಸ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದು ವರ್ಷದ ಹಿಂದೆ ಮಾನಸ ಅವರನ್ನು ಉಲ್ಲಾಸ್ ಗೌಡ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಬಳಿಕ ಅವರು ಬೆಂಗಳೂರಿನ ಗಿರಿನಗರದಲ್ಲಿ ವಾಸವಾಗಿದ್ದರು.
ಮದುವೆಯಾಗಿ ಕೆಲವೇ ತಿಂಗಳಲ್ಲಿ ಪತಿ ಮನೆಯಿಂದ ವರದಕ್ಷಿಣೆಯ ಕಿರುಕುಳ ಆರಂಭವಾಗಿತ್ತು. ಇದು ತಾರಕಕ್ಕೇರಿ ವಿಚ್ಚೇದನದ ತನಕ ಹೋಗಿದ್ದು ವಕೀಲರ ನೋಟೀಸ್ ಕೂಡಾ ನೀಡಲಾಗಿತ್ತು. ಇದರಿಂದ ಬೇಸರಗೊಂಡ ಮಾನಸ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.




