ಬೆಳ್ತಂಗಡಿ: ಅವಿವಾಹಿತ ಯುವಕನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ
ಬೆಳ್ತಂಗಡಿ: ಗುರುವಾಯನಕೆರೆ ಖಾಸಗಿ ವಿದ್ಯುತ್ ಸಬ್ ಸ್ಟೇಷನ್ ಸಮೀಪ ಅವಿವಾಹಿತ ಯುವಕನೋರ್ವನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಬುಧವಾರ ಪತ್ತೆಯಾಗಿದೆ.
ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲನಿ ನಿವಾಸಿ ಶರೀಫ್ ಕೆ ಎಂಬವರ ಪುತ್ರ ಮುಸ್ತಾಕ್ (27) ಮೃತ ಯುವಕ ಎಂದು ಗುರುತಿಸಲಾಗಿದೆ.
ಕುವೆಟ್ಟು ಗ್ರಾಮದ ಶಕ್ತಿನಗರ ಸಮೀಪವಿರುವ ವಿದ್ಯುತ್ ಸಬ್ ಸ್ಟೇಷನ್ ಸಮೀಪ ಮೃತದೇಹ ಪತ್ತೆಯಾಗಿದ್ದು, ಮೃತ ಯುವಕ ಚಾಲಕ ವೃತ್ತಿ ನಡೆಸುತ್ತಿದ್ದು, ಜೂ.30ರಂದು ಮುಸ್ತಾಕ್ ರನ್ನು ಅವರ ಸಹೋದರ ಮನಾಸಿರ್ ಎಂಬವರು ಬೈಕ್ನಲ್ಲಿ ಕಲ್ಲೇರಿಯಿಂದ ಮದ್ದಡ್ಕದಲ್ಲಿರುವ ಲಾರಿಯ ಬಳಿ ಬಿಟ್ಟು ಹೋಗಿದ್ದರು.
ಮೃತನ ತಂದೆ ಶರೀಫ್ ಅವರು ಮಗನನ್ನು ಕೊಲೆ ಮಾಡಿ, ಇಲ್ಲಿ ತಂದು ಎಸೆದು ಹೋಗಿರುವ ಶಂಕೆ ವ್ಯಕ್ತಪಡಿಸಿದ್ದು, ಮೃತದೇಹ ಸಿಕ್ಕ ಪ್ರದೇಶದಲ್ಲಿ ಯಾವುದೇ ಸಿಸಿ ಕ್ಯಾಮೆರಾ, ಸೆಕ್ಯೂರಿಟಿ ಗಾರ್ಡ್ ಇಲ್ಲ ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್ ಐ ಆನಂದ್, ಸೋಕೋ ತಂಡ, ಕುವೆಟ್ಟು ಗ್ರಾ.ಪಂ. ಪಿಡಿಒ ಇಮ್ತಿಯಾಝ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




