ಜೈಲಿನಲ್ಲಿರುವ ನಟ ದರ್ಶನ್, ಆತನ ತಂಡಕ್ಕೆ ವಿಐಪಿ ಸೌಲಭ್ಯ ಫೋಟೊ ವೈರಲ್: ಫೋಟೊ ವೈರಲ್ ಆದದ್ದು ಹೇಗೆ ಗೊತ್ತೇ?
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ 16 ಮಂದಿ ಸಹಚರರ ಜೊತೆ ಬಂಧಿತನಾಗಿ ಕಳೆದ 65 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಮತ್ತು ಆತನ ತಂಡಕ್ಕೆ ವಿಐಪಿ ಸೌಲಭ್ಯ ಸಿಗುತ್ತಿರುವುದು ಫೋಟೋ ಹಾಗೂ ವಿಡಿಯೋ ಮೂಲಕ ವೈರಲ್ ಆಗಿದೆ.
ಫೋಟೊದಲ್ಲಿ ಜೈಲಿನ ಬ್ಯಾರಕ್ ಹೊರಗೆ ಕುರ್ಚಿಯಲ್ಲಿ ಕುಳಿತಿರುವ ದರ್ಶನ್, ಒಂದು ಕೈಯಲ್ಲಿ ಕಾಫಿ ಮಗ್ ಮತ್ತು ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದಿರುವುದು ಬಹಿರಂಗ ಗೊಂಡಿರುವ ಫೋಟೊದಲ್ಲಿ ಕಾಣಿಸುತ್ತಿದೆ. ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್, ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ದರ್ಶನ್ ಮ್ಯಾನೇಜರ್ ನಾಗರಾಜ್ ಹಾಗೂ ಮತ್ತೊಬ್ಬ ಆರೋಪಿ ಕುಳ್ಳ ಸೀನಾ ಜೊತೆಯಲ್ಲಿ ನಗುತ್ತಾ ಮಾತುಕತೆ ನಡೆಸಲಾಗುತ್ತಿದೆ.
ರೌಡಿ ಶೀಟರ್ ವೇಲು ಎಂಬ ಕೈದಿ ದರ್ಶನ್ ಮತ್ತು ಸಹಚರರು ವಿಶೇಷ ಬ್ಯಾರಕ್ ಎದುರಿನ ನಡಿಗೆ ಪಥದ ಬಳಿ ಕುಳಿತು ಹರಟುತ್ತಿದ್ದ ಫೋಟೊವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು, ತನ್ನ ಪತ್ನಿಗೆ ಕಳುಹಿಸಿದ್ದ. ಆತನ ಪತ್ನಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದರು. ಹೀಗೆ ಆ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.




