ನೆಲ್ಯಾಡಿ: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ:
ಸವಾರ ಮೃತ್ಯು- ಮತ್ತೊಬ್ಬ ಗಂಭೀರ
ನೆಲ್ಯಾಡಿ: ಬೈಕ್ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ನಲ್ಲಿದ್ದ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೊಳಿತ್ತೊಟ್ಟು ಸಮೀಪದ ಸಣ್ಣಂಪಾಡಿಯಲ್ಲಿ ರಾತ್ರಿ ನಡೆದಿದೆ.

ಇಚ್ಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ಜಾರ್ಜ್ ಹಾಗೂ ಝಾನ್ಸಿ ದಂಪತಿ ಪುತ್ರ ಅಲ್ವಿನ್ (23) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ನೆಲ್ಯಾಡಿ ಗ್ರಾಮದ ಪಡಡ್ಕ ನಿವಾಸಿ ಸೆಬಿನ್ ಎಂಬವರು ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ. ಸೆಬಿನ್ ನೆಲ್ಯಾಡಿಯಲ್ಲಿ ಕೊರಿಯರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ರಾತ್ರಿ ಅಲ್ವಿನ್ ಹಾಗೂ ಸೆಬಿನ್ರವರು ಕೊರಿಯರ್ ಪಾರ್ಸೆಲ್ ಹಿಡಿದುಕೊಂಡು ನೆಲ್ಯಾಡಿಯಿಂದ ಉಪ್ಪಿನಂಗಡಿಗೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಅಲ್ವಿನ್ ಹಾಗೂ ಸೆಬಿನ್ ಪ್ರಯಾಣಿಸುತ್ತಿದ್ದ ಬೈಕ್ ಹಾಗೂ ಮಂಗಳೂರಿನಿಂದ ಹಾಸನ ಕಡೆಗೆ ಹೋಗುತ್ತಿದ್ದ ಲಾರಿ ಮಧ್ಯೆ ಸಣ್ಣಂಪಾಡಿಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದರು.
ಇಬ್ಬರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈ ಪೈಕಿ ಗಂಭೀರ ಗಾಯಗೊಂಡಿದ್ದ ಇಚ್ಲಂಪಾಡಿ ನಿವಾಸಿ ಅಲ್ವಿನ್ರವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.




