ಸಂಘಪರಿವಾರದ ಒತ್ತಡಕ್ಕೆ ಮಣಿದು ನೂರ್ಜಹಾನ್ ಮೇಲೆ ಪ್ರಕರಣ: ವಿಮೆನ್ ಇಂಡಿಯಾ ಮೂವ್ಮೆಂಟ್
ಮಂಗಳೂರು: ಮೋರ್ಗನ್ಸ್ ಗೇಟ್ ನಲ್ಲಿ ನಡೆದ ಆತ್ಮಹತ್ಯೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತಾಂತರದ ಯತ್ನ ಆರೋಪದಲ್ಲಿ ಬಂಧಿಸಲ್ಪಟ್ಟ ನೂರ್ ಜಹಾನ್ ಎಂಬವರು ಮತಾಂತರಕ್ಕೆ ಯತ್ನಿಸಿಲ್ಲ, ಬದಲಾಗಿ ಮಾನವೀಯ ನೆಲೆಯಲ್ಲಿ ವಿಜಯಲಕ್ಷ್ಮೀ ಅವರಿಗೆ ಸಹಕರಿಸಿದ್ದಾರೆ. ಹಾಗಾಗಿ ನೂರ್ ಜಹಾನ್ ಬಂಧನ ಖಂಡನೀಯವಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಸದಸ್ಯರು ತಿಳಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಅಧ್ಯಕ್ಷೆ ಶಾಹಿದಾ ತಸ್ಲಿಂ ಮಾತನಾಡಿ, ಬಂಧಿತ ನೂರ್ ಜಹಾನ್ ವಿರುದ್ಧ ರಾಜಕೀಯ ಪ್ರೇರಿತ, ಒಂದೇ ಕುಟುಂಬದ ನಾಲ್ವರು ಸಾವು ಪ್ರಕರಣದಲ್ಲಿ ಪೊಲೀಸರು ರಾಜಕೀಯ ಮತ್ತು ಸಂಘಪರಿವಾರದ ಒತ್ತಡಕ್ಕೆ ಮಣಿದು ನೂರ್ಜಹಾನ್ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಾಗೇಶ್ ಆತ್ಮಹತ್ಯೆಗೆ ಯತ್ನಿಸುವ ಮೊದಲು ನೂರ್ಜಹಾನ್ ಮೇಲೆ ಸುಳ್ಳು ಆರೋಪ ಮಾಡಿರಬಹುದು. ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ಮಾಡುವ ಅಗತ್ಯತೆ ಇದೆ, ಇಲ್ಲಿ ಪೊಲೀಸ್ ಇಲಾಖೆ ಹೆಂಡತಿ ಮಕ್ಕಳನ್ನು ಕೊಂದು ಕ್ರೌರ್ಯ ಮೆರೆದ ನಾಗೇಶ್ ನನ್ನು ಅಮಾಯಕನಾಗಿ ಬಿಂಬಿಸಿದೆ. ಡೆತ್ ನೋಟ್ ಬಗ್ಗೆ ಫಾರೆನ್ಸಿಕ್ ಲ್ಯಾಬ್ನಲ್ಲಿ ತನಿಖೆಯಾಗಲಿ. ನೂರ್ಜಹಾನ್ಗೆ ಧರ್ಮ ಪ್ರಚಾರ ನಡೆಸುವ ಯಾವುದೇ ಹಿನ್ನೆಲೆ ಇಲ್ಲ. ಡೆತ್ ನೋಟ್ ಹೆಸರಿಲ್ಲಿ ನೂರ್ಜಹಾನ್ ಕುಟುಂಬಕ್ಕೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಆಕೆಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಷಾ ಬಜ್ಪೆ, ದ.ಕ ಜಿಲ್ಲಾಧ್ಯಕ್ಷೆ ನಝಿಯಾ ಬೆಳ್ಳಾರೆ, ಮಹಾನಗರ ಪಾಲಿಕೆಯ ಸದಸ್ಯೆ ಸಂಶಾದ್ ಅಬೂಬಕ್ಕರ್, ಮಲ್ಲೂರು ಗ್ರಾ.ಪಂ ಉಪಾಧ್ಯಕ್ಷೆ ಪ್ರೇಮಾ ಉಪಸ್ಥಿತರಿದ್ದರು.




