ಮಂಗಳೂರು: ತಡೆಗೋಡೆ ಕುಸಿದು ಮಣ್ಣಿನಡಿ ಹೂತು ಹೋದ ಮಹಿಳೆ ಮತ್ತು ಮಗು: ಮಹಿಳೆ ಮೃತ್ಯು- ಮಗು ಪಾರು
ಮಂಗಳೂರು: ನಗರದ ಹೊರವಲಯದ ಬೊಂದೇಲ್ ಕೃಷ್ಣ ನಗರದಲ್ಲಿ ತಡೆಗೋಡೆ ಕುಸಿದು ಮಗು ಹಾಗೂ ಮಹಿಳೆ ಮಣ್ಣಿನಡಿಗೆ ಸಿಲುಕಿದ ಘಟನೆ ಸಂಭವಿಸಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ್ದರಿಂದ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಬಳಿಕ ಮೃತಪಟ್ಟಿದ್ದಾರೆ.
ಕೃಷ್ಣನಗರದಲ್ಲಿ ಮನಪಾದಿಂದ ನಡೆಯುತ್ತಿದ್ದ ಜಲ ಸಿರಿ ಯೋಜನೆ ಕಾಮಗಾರಿ ವೇಳೆ ತಡೆಗೋಡೆ ಕುಸಿದು ಬಿದ್ದಿದೆ. ಪರಿಣಾಮ ಉತ್ತರ ಕನ್ನಡ ಮೂಲದ ಕಾರ್ಮಿಕ ಮಹಿಳೆ ಹಾಗೂ ಮಗು ಮಣ್ಣಿನಡಿ ಹೂತು ಹೋಗಿದ್ದರು.
ಸ್ಥಳದಲ್ಲಿದ್ದ ಜೆಸಿಬಿ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಮಣ್ಣಿನಡಿಯಿಂದ ಇಬ್ಬರನ್ನೂ ಮೇಲೆತ್ತಲಾಗಿದೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮಗು ಅಪಾಯದಿಂದ ಪಾರಾಗಿದೆ.