2ನೇ ಹೆಂಡತಿಗಾಗಿ ಮೊದಲ ಪತ್ನಿಯನ್ನೇ ಕೊಂದು ಕೆರೆಗೆ ಎಸೆದ ಪತಿ
ದಾವಣಗೆರೆ, ಜ.25: ಎರಡನೇ ಹೆಂಡತಿಗಾಗಿ ಮೊದಲ ಪತ್ನಿಯನ್ನೇ ಕೊಂದು ಕೆರೆಗೆ ಹಾಕಿದ ಘಟನೆ ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಾಸಲುಹಳ್ಳ ಗ್ರಾಮದ ಕಾವ್ಯ ಹೀಗೆ ಕೊಲೆಯಾಗಿರುವ ಗೃಹಿಣಿಯಾಗಿದ್ದು, ಈಕೆ ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ ಎನ್ನುವನನ್ನು ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದಳು, ಅವರ ಮುದ್ದಾದ ಸಂಸಾರಕ್ಕೆ ಒಂದು ಮಗು ಕೂಡ ಇತ್ತು.
ಆದರೆ, ಬೇರೆ ಮಹಿಳೆಯರ ಚಪಲ ಹೊಂದಿದ್ದ ಸಚಿನ್ ದಾವಣಗೆರೆ ತಾಲ್ಲೂಕಿನ ಕಡ್ಲೆಬಾಳು ಗ್ರಾಮದ ನಿವಾಸಿ ಚೈತ್ರ ಎಂಬಾಕೆಯ ಹಿಂದೆ ಬಿದ್ದಿದ್ದ. ಆಕೆಯನ್ನು ಕೂಡ ಎರಡನೇ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದೆ.
ಇನ್ನು ಇವರಿಬ್ಬರ ಸರಸಕ್ಕೆ ಕಾವ್ಯ ಅಡ್ಡಿಯಾದ ಹಿನ್ನಲೆ ಈಕೆಯನ್ನು ಕತ್ತು ಹಿಸುಕಿ ಸಾಯಿಸಿ ಗೋಣಿಚೀಲದಲ್ಲಿ ತುಂಬಿಕೊಂಡು ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಗೆ ತಂದು ಹಾಕಿದ್ದಾರೆ.




