December 19, 2025

ಮೂಡುಬಿದಿರೆ: ಗ್ರಾಹಕರ 13.50 ಲಕ್ಷ ರೂ. ದುರ್ಬಳಕೆ: ಅಂಚೆ ಪಾಲಕನ ವಿರುದ್ಧ ದೂರು ದಾಖಲು

0
image_editor_output_image-554356325-1705038592678.jpg

ಮೂಡುಬಿದಿರೆ: ಕಡಂದಲೆ ಗ್ರಾಮೀಣ ಅಂಚೆ ಕಚೇರಿಯಲ್ಲಿ ಗ್ರಾಹಕರ ಸುಮಾರು 13.50 ಲಕ್ಷ ರೂಪಾಯಿ ಹಣ ದುರ್ಬಳಕೆ ಮಾಡಿದ ಆರೋಪದ ಮೇಲೆ ಅಂಚೆ ಪಾಲಕ ಅಶೋಕ್ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಬುಧವಾರ ವಂಚನೆ ದೂರು ದಾಖಲಾಗಿದೆ.

ಇದೇ ವೇಳೆ ಆರೋಪಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ. 2010ರಿಂದ 2021ರ ಅವಧಿಯಲ್ಲಿ ಅಶೋಕ್ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಸುಮಾರು 22 ಅಂಚೆ ಗ್ರಾಹಕರ ಉಳಿತಾಯ ಖಾತೆ ಮತ್ತು 4 ಮಂದಿ ಗ್ರಾಹಕರ ವಿವಿಧ ವಿಮಾ ಪಾಲಿಸಿಗಳ ಸುಮಾರು 13.50 ಲಕ್ಷ ರೂ. ಹಣವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಗ್ರಾಹಕರು ಅಂಚೆ ಇಲಾಖೆಗೆ ಕಟ್ಟಿದ ಹಣವನ್ನು ಅವರ ಪಾಸ್ ಪುಸ್ತಕದಲ್ಲಿ ಮಾತ್ರ ನಮೂದಿಸುತ್ತಿದ್ದು ಇಲಾಖೆಯ ದಾಖಲಾತಿಯಲ್ಲಿ ಇರುತ್ತಿರಲಿಲ್ಲ. ಗ್ರಾಹಕರಿಂದ ಸಂಗ್ರಹವಾಗುತ್ತಿದ್ದ ಹಣವನ್ನು ಸಮೀಪದ ಮಿತ್ತಬೈಲು ಉಪ ಅಂಚೆ ಕಚೇರಿಗೆ ದಿನಂಪ್ರತಿ ನೀಡ ಬೇಕಾಗಿತ್ತು. ಆದರೆ ಆರೋಪಿ ಕೆಲವು ಗ್ರಾಹಕರ ಹಣವನ್ನು ಇಲಾಖೆಯ ಲೆಕ್ಕಕ್ಕೆ ತೋರಿಸುತ್ತಿರಲಿಲ್ಲ ಎನ್ನಲಾಗಿದೆ. ಹಳ್ಳಿಯ ಜನರಿಗೆ ಈತನ ವಂಚನೆ ಬಗ್ಗೆ ಅರಿವಿರಲಿಲ್ಲ. ಕೆಲವು ಗ್ರಾಹಕರು ತಮ್ಮ ಪಾಸ್ ಪುಸ್ತಕಗಳನ್ನು ಅಂಚೆ ಕಚೇರಿಯಲ್ಲಿಯೇ ಬಿಟ್ಟು ಹೋಗುತ್ತಿದ್ದರು.

ಏತನ್ಮಧ್ಯೆ ಬಂಟ್ವಾಳ ಉಪವಿಭಾಗದ ಸಹಾಯಕ ಸೂಪರಿಂಟೆಂಡೆಂಟ್ ಆಗಿದ್ದ ಲೋಕನಾಥ್ ಅವರು ಈ ವಂಚನೆ ಪ್ರಕರಣವನ್ನು ಬಯಲಿಗೆಳೆದು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಿಗೆ ತನಿಖಾ ವರದಿಯನ್ನು ಸಲ್ಲಿಸಿದ್ದರು.

ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬಂಟ್ವಾಳ ಉಪವಿಭಾಗದ ಈಗಿನ ಸಹಾಯಕ ಸೂಪರಿಂಟೆಂಡೆಂಟ್ ಪ್ರಹ್ಲಾದ ನಾಯಕ್ ಆರೋಪಿ ಅಶೋಕ್ ವಿರುದ್ಧ ಬುಧವಾರ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ.

ಆರೋಪಿಯಿಂದ ಈಗಾಗಲೇ 8 ಲಕ್ಷ ರೂ. ಹಣ ವಸೂಲಿ ಮಾಡಲಾಗಿದ್ದು ಉಳಿದ ಹಣವನ್ನು ಅಂಚೆ ಇಲಾಖೆ ಸೇರಿಸಿ ಗ್ರಾಹಕರಿಗೆ ಹಿಂತಿರುಗಿಸಿದೆ ಎನ್ನಲಾಗಿದೆ. ಪ್ರಾಂತ್ಯ ಲಾಡಿ ನಿವಾಸಿಯಾಗಿರುವ ಆರೋಪಿ ಅಶೋಕ್‍ನನ್ನು ಕೆಲಸದಿಂದ ವಜಾ ಮಾಡಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!