March 21, 2026

ಓಮಿಕ್ರಾನ್ ಪತ್ತೆ ಹಿನ್ನೆಲೆ:
ಮಾರ್ಗಸೂಚಿ ಪ್ರಕಟಿಸಿದ ಮಹಾರಾಷ್ಟ್ರ ಸರ್ಕಾರ

0
992450-mumbai-pixabay.jpg

ಮುಂಬೈ: ಕೊರೊನಾವೈರಸ್‌ನ ರೂಪಾಂತರ ತಳಿ ಓಮಿಕ್ರಾನ್ ಪ್ರಕರಣಗಳು ದೇಶದಲ್ಲಿ ವರದಿಯಾಗಿರುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ ಖಚಿತಪಡಿಸಿದ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ ಮತ್ತು ಜಿಂಬಾಬ್ವೆ ಸೇರಿದಂತೆ ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗಿ ವರದಿಯಾಗಿರುವ ರಾಷ್ಟ್ರಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಗಾಗುವಂತೆ ಮತ್ತು 7 ದಿನ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದೆ. ಹಾಗೆಯೇ, ಏಳು ದಿನಗಳ ಬಳಿಕ ಮತ್ತೊಮ್ಮೆ ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ವರದಿಯಲ್ಲಿ ನೆಗೆಟಿವ್ ಬಂದರೆ, ಅವರು ಮನೆಯಲ್ಲಿ 7 ದಿನ ಪ್ರತ್ಯೇಕವಾಸದಲ್ಲಿ ಉಳಿಯಬಹುದು. ಒಂದುವೇಳೆ, ವರದಿಯಲ್ಲಿ ಸೋಂಕು ಇರುವುದು ಖಚಿತವಾದರೆ, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಕಳೆದ 15 ದಿನಗಳಲ್ಲಿ ಮಹಾರಾಷ್ಟ್ರಕ್ಕೆ ಪ್ರವೇಶಿಸುವ ಮುನ್ನ ಓಮಿಕ್ರಾನ್ ಕಂಡುಬಂದಿರುವ ಯಾವುದೇ ರಾಷ್ಟ್ರಕ್ಕೆ ಭೇಟಿ ನೀಡಿದ್ದರೆ, ಅದನ್ನೂ ‘ಭಾರಿ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ ಎಂದೂ ಸರ್ಕಾರ ತಿಳಿಸಿದೆ.

ದೇಶೀಯ ವಿಮಾನ ಸಂಚಾರ ಮಾಡುವ ಪ್ರಯಾಣಿಕರು, ಪೂರ್ಣಪ್ರಮಾಣದಲ್ಲಿ ಲಸಿಕೆ ಪಡೆದುಕೊಂಡಿರಬೇಕು ಇಲ್ಲವೇ ಪ್ರಯಾಣಕ್ಕೂ 72 ಗಂಟೆಗಳ ಮೊದಲು ಮಾಡಿಸಿದ ಆರ್‌ಟಿ–ಪಿಸಿಆರ್ ಪರೀಕ್ಷೆಯ ‘ನೆಗೆಟಿವ್‌’ ಫಲಿತಾಂಶದ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ ಎಂದೂ ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!