ಕೇರಳ: ಸಿಪಿಐ (ಎಂ) ಮುಖಂಡನನ್ನು ಕಡಿದು ಕೊಲೆ
ಪತ್ತನಂತಿಟ್ಟ: ತಿರುವಲ್ಲಾದಲ್ಲಿ ಸಿಪಿಐ (ಎಂ) ಸ್ಥಳೀಯ ಸಮಿತಿ ಕಾರ್ಯದರ್ಶಿಯನ್ನು ಕಡಿದು ಹತ್ಯೆ ಮಾಡಲಾಗಿದೆ. ಪೆರಿಂಗಾರ ಸ್ಥಳೀಯ ಸಮಿತಿ ಕಾರ್ಯದರ್ಶಿ ಸಂದೀಪ್ ಕೊಲೆಯಾದವರು. ಹತ್ಯೆಯ ಹಿಂದೆ ಆರ್ಎಸ್ಎಸ್ ಕಾರ್ಯಕರ್ತರು ಇದ್ದಾರೆ ಎಂದು ಸ್ಥಳೀಯ ಸಿಪಿಐ (ಎಂ) ಮುಖಂಡರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಕ್ರಿಯ ಆರ್ಎಸ್ಎಸ್ ಕಾರ್ಯಕರ್ತ ವಿಷ್ಣು ಸೇರಿದಂತೆ ಐವರ ತಂಡ ಈ ಕೃತ್ಯವನ್ನು ಎಸಗಿದ್ದಾರೆ.
ಮೇಪ್ರಾಲ್ ನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಸಂದೀಪ್ ಅವರ ಕುತ್ತಿಗೆ ಮತ್ತು ಎದೆಗೆ ಐದಕ್ಕಿಂತ ಅಧಿಕ ಇರಿತದ ಗಾಯಗಳಾಗಿವೆ. ಸಂದೀಪ್ ಕುಮಾರ್ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರೂ ಆಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ.




