ಮನೆಯಲ್ಲಿದ್ದವರ ಕೈಕಾಲು ಕಟ್ಟಿ ದರೋಡೆ: ಅಂತರ್ ರಾಜ್ಯ ಕಳ್ಳರ ಬಂಧನ

ಆನೇಕಲ್: ಮನೆಯಲ್ಲಿದ್ದವರ ಕೈಕಾಲು ಕಟ್ಟಿ ದರೋಡೆ ಮಾಡುತ್ತಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳರ ಗ್ಯಾಂಗ್ನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಎನ್ ಸತೀಶ್ ಕುಮಾರ್, ಮಣಿಕಂಠನ್, ಸತೀಶ್, ಅಯ್ಯನಾರ್, ಕಿರಣ್, ಸತೀಶ್ ಅಲಿಯಾಸ್ ಮಟನ್ ಸತೀಶ್ ಎಂದು ಗುರುತಿಸಲಾಗಿದೆ.
ಆರೋಪಿಗಳು ತಮಿಳುನಾಡಿನ ಹೊಸೂರು ಮೂಲದದವರಾಗಿದ್ದಾರೆ. ಬಂಧಿತರು ಹಲವಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮನೆಯಲ್ಲಿ ಜನರಿದ್ದ ವೇಳೆಯೇ ತೆರಳಿ ಕೈಕಾಲು ಕಟ್ಟಿ ದರೋಡೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆನೇಕಲ್ನಲ್ಲಿ ಕೀರ್ತನಾ ಎಂಬ ಯುವತಿಯನ್ನು ಮನೆಯಲ್ಲಿ ಕಟ್ಟಿ ಹಾಕಿ ಚಿನ್ನಾಭರಣ ದೋಚಿ ಆರೋಪಿಗಳು ಪರಾರಿಯಾಗಿದ್ದರು.
ಅಲ್ಲದೇ ಕಳೆದ ನ.28ರಂದು ಅತ್ತಿಬೆಲೆಯ ಕುಮಾರ್ ಲೇಔಟ್ನ ಎಲ್ಐಸಿ ಏಜೆಂಟ್ ದೇವರಾಜೇಗೌಡ ಎಂಬವರ ಮನೆಯಲ್ಲಿ ದರೋಡೆ ಮಾಡಿದ್ದರು.
ಅವರ ಮನೆಗೆ ಎಲ್ಐಸಿ ಪಾಲಿಸಿ ಮಾಡಿಸಬೇಕೆಂದು ಮೂರು ಬಾರಿ ಬಂದು ಹೋಗಿದ್ದರು.
ಬಳಿಕ ಹೊಂಚು ಹಾಕಿ ಮಾರಕಾಸ್ತ್ರಗಳನ್ನ ತೋರಿಸಿ ಕೈಕಾಲು ಹಾಗೂ ಬಾಯಿಗೆ ಟೇಪ್ ಸುತ್ತಿ 12,50,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದರು.