ಮಂಗಳೂರು: 14 ಬಾರಿ ವಾರೆಂಟ್ ಹೊರಡಿಸಿದ್ದರೂ, ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಮಂಗಳೂರು: ನ್ಯಾಯಾಲಯದಿಂದ 14 ಬಾರಿ ಬಂಧನ ವಾರೆಂಟ್ ಹೊರಡಿಸಿದ್ದರೂ, ವಿಳಾಸ ಬದಲಾಯಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಂಕನಾಡಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಭದ್ರಾವತಿಯ ಸಂತೆ ಮೈದಾನ ಬೋವಿ ಕಾಲನಿ ನಿವಾಸಿ ಚಂದ್ರ ಶೇಖರ್ ಲಿಂಗರಾಜ್ ಬೋವಿ (26) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಕನಾಡಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು, ಒಂದೂವರೆ ವರ್ಷದಿಂದ ತಲೆ ಮರೆಸಿಕೊಂಡಿದ್ದ. ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 14 ಬಾರಿ ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಆದರೆ ಆರೋಪಿ ವಿಳಾಸ ಬದಲಾಯಿಸಿ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿದ್ದ.
ಖಚಿತ ಮಾಹಿತಿ ಮೇರೆಗೆ ಜು.11ರಂದು ಕಂಕನಾಡಿ ನಗರ ಠಾಣಾ ವಾರಂಟ್ ಸಿಬ್ಬಂದಿ ಬಾಲರಾಜ್ ಮತ್ತು ರವಿಕುಮಾರ್ ಅವರು ಬಾಳೆ ಹೊನ್ನೂರು ಬಳಿಯ ಮಲ್ಲಿಗೇಹಳ್ಳಿ ಮೈದಾಳು ಎಂಬಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.




