ಕನ್ಯಾನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ದುಃಸ್ಥಿತಿ ಮತ್ತು ಸುಧಾರಣೆ ಕುರಿತು ಪ್ರವಾಸಿ ಕೂಟ ವಿಟ್ಲ (ರಿ)* ನಿಯೋಗದಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಭೇಟಿ
ಕನ್ಯಾನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಯನ್ನು ತುರ್ತಾಗಿ ನಿವಾರಿಸುವಂತೆ ಆಗ್ರಹಿಸಿ ಪ್ರವಾಸಿ ಕೂಟ ವಿಟ್ಲ (ರಿ.) ನಿಯೋಗದಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಅವರನ್ನು ಭೇಟಿ ಮಾಡಿ ಕುಂದುಕೊರತೆಗಳ ಸಂಪೂರ್ಣ ವಿವರಣೆ ನೀಡಿ ಮನವಿ ಸಲ್ಲಿಸಲಾಯಿತು.
ಮನವಿಯನ್ನು ಆತ್ಮೀಯವಾಗಿ ಸ್ವೀಕರಿಸಿದ ಮಾನ್ಯ ಶಾಸಕರು ವಿಷಯದ ಗಂಭೀರತೆಯನ್ನು ಅರಿತು, ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಸರ್ಕಾರದ ಮಟ್ಟದಲ್ಲಿಯೂ ಅಗತ್ಯ ಕ್ರಮಗಳನ್ನು ಕೈಗೊಂಡು ಪ್ರವಾಸಿಕೂಟದ ಸಹಕಾರದೊಂದಿಗೆ ಸಾಧ್ಯವಾದಷ್ಟು ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
*ಅಲ್ಲದೆ, ಮುಂದಿನ ದಿನಗಳಲ್ಲಿ ಸಮಸ್ಯೆಗಳ ಸಮಗ್ರ ಚರ್ಚೆಗಾಗಿ ಸರಕಾರಿ ಅಧಿಕಾರಿಗಳ ಜೊತೆ ಪ್ರವಾಸಿ ಕೂಟದ ಪ್ರತಿನಿಧಿಗಳು ಭಾಗವಹಿಸಲು ಆಹ್ವಾನ ನೀಡಿದರು*.
ಕನ್ಯಾನ ಭಾಗದ ಸಾರ್ವಜನಿಕರು ಹಲವು ವರ್ಷಗಳಿಂದ ಎದುರಿಸುತ್ತಿರುವ ಆರೋಗ್ಯ ಸೇವೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಬೇಕು ಎಂಬುದು ಪ್ರವಾಸಿ ಕೂಟ ವಿಟ್ಲ (ರಿ.)ಯ ಪ್ರಮುಖ ಆಶಯವಾಗಿದೆ. ಈ ಮನವಿಯ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡು ಆಸ್ಪತ್ರೆಯಲ್ಲಿ ಔಷಧಿಯ ಕೊರತೆ, ವೈದ್ಯರು, ಸಿಬ್ಬಂದಿ, ಅಗತ್ಯ ವೈದ್ಯಕೀಯ ಉಪಕರಣಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಶೀಘ್ರದಲ್ಲೇ ಒದಗಿಸಲಿದೆ ಎಂಬ ವಿಶ್ವಾಸವನ್ನು ಪ್ರವಾಸಿ ಕೂಟ ವಿಟ್ಲ (ರಿ.) ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಪ್ರವಾಸಿ ಕೂಟ ವಿಟ್ಲ (ರಿ) ಅಧ್ಯಕ್ಷ ಮೊಹಮ್ಮದ್ ಮಸೂದ್ ವಿಟ್ಲ, ಉಪಾಧ್ಯಕ್ಷರಾದ ಶಾಫಿ ಬಹರೈನ್ ಮತ್ತು ಅಬ್ದುಲ್ ಅಝೀಝ್ (KSA), ಪ್ರಧಾನ ಕಾರ್ಯದರ್ಶಿ ತವಾಜ್ ಕತಾರ್, ಜೊತೆ ಕಾರ್ಯದರ್ಶಿಗಳಾದ ಆಶಿಫ್ ಬಹರೈನ್ ಹಾಗೂ ಯೂನೂಸ್ ಅಬುಧಾಬಿ, ಮಾಧ್ಯಮ ವಿಭಾಗದ ನವಾಝ್ ಕಡಂಬು (UAE) ಹಾಗೂ ಹಿರಿಯ ನಿವೃತ ಪ್ರವಾಸಿ ಹಮೀದ್ ಬ್ಯಾರಿ ಒಕ್ಕೆತ್ತೂರು (KSA ) ಉಪಸ್ಥಿತರಿದ್ದರು.




