ಚುನಾವಣೆ ಸಂದರ್ಭದಲ್ಲಿ 64 ಮಸೀದಿಗಳಿಗೆ ನೀಡಿದ್ದ 17.30 ಕೋಟಿ ರೂ. ಹಣವನ್ನು ವಾಪಸ್ ಕೇಳಿದ ಕೆಜಿಎಫ್ ಬಾಬು
ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಮುಖಭಂಗ ಎದುರಿಸಿರುವ ಯೂಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು, 64 ಮಸೀದಿಗಳು ತಮ್ಮಿಂದ ಪಡೆದ ಚೆಕ್ ಗಳನ್ನು ವಾಪಸ್ ನೀಡುವಂತೆ ಉರ್ದು ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಿಸಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿರುವ ಕೆಜಿಎಫ್ ಬಾಬು, 64 ಮಸೀದಿಗಳ ಸಮಿತಿಗಳಿಗೆ 17.30 ಕೋಟಿ ರೂಪಾಯಿ ಮೌಲ್ಯದ ಚೆಕ್ ಗಳನ್ನು ನೀಡಿದ್ದರು.
ಈಗ ಸಮಿತಿಗಳಿಗೆ ತಮ್ಮ ಹಣ ಹರಾಮ್ ಆಗಿದ್ದು ಅದನ್ನು ಖರ್ಚು ಮಾಡಬೇಡಿ, ಸಾಧ್ಯವಾದಷ್ಟೂ ಬೇಗ ಅದನ್ನು ವಾಪಸ್ ಕೊಡಿ ಎಂದು ಹೇಳಿದ್ದಾರೆ. ದಾರುಲ್ ಉಲೂಮ್ ನ ಫತ್ವಾವನ್ನು ಉಲ್ಲೇಖಿಸಿರುವ ಬಾಬು, ಚುನಾವಣಾ ಸಮಯದಲ್ಲಿ ರಾಜಕಾರಣಿಗಳಿಂದ ಇಂತಹ ದೇಣಿಗೆಗಳನ್ನು ಪಡೆಯುವುದು ಹರಾಮ್ ಆಗಿದೆ ಎಂದು ಸಿದ್ದಾಪುರದ ಟ್ಯಾಂಕ್ ಗಾರ್ಡನ್ನಲ್ಲಿರುವ ಮಸೀದಿ-ಇ-ಅತಿಕ್ ಮತ್ತು ಕೃಷ್ಣಪ್ಪ ಗಾರ್ಡನ್ನ ಮಸೀದಿ-ಇ-ಹುಸ್ನಾ ಸೇರಿದಂತೆ ಮಸೀದಿಗಳ ಸಮಿತಿಗಳಿಗೆ ಬಾಬು ತಮ್ಮ ಚೆಕ್ಗಳನ್ನು ಹಿಂದಿರುಗಿಸುವಂತೆ ಹೇಳಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಚುನಾವಣೆ ವೇಳೆ ಚಿಕ್ಕಪೇಟೆಯ ಸ್ಲಂ ನಿವಾಸಿಗಳಿಗೆ 300 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಪ್ರಚಾರದ ವೇಳೆ ಬಾಬು ಭರವಸೆ ನೀಡಿದ್ದರು. ಚಿಕ್ಕಪೇಟೆ ಅಭಿವೃದ್ಧಿಗೆ 300 ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ಪ್ರಣಾಳಿಕೆಯನ್ನೂ ಮಂಡಿಸಿದ್ದರು.
ಬಾಬು ಅವರು 1,621 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ ಮತ್ತು 62.32 ಕೋಟಿ ರೂಪಾಯಿಗಳ ಹೊಣೆಗಾರಿಕೆ ಹೊಂದಿದ್ದಾರೆ ಎಂದು ಚುನಾವಣಾ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಮಾವಳ್ಳಿ ಮಸೀದಿಯ ಖಾದಿರ್ ಅಹ್ಮದ್ ಷರೀಫ್ ಮಾತನಾಡಿ, ಬಾಬು ಚಿಕ್ಕಪೇಟೆಯ ಮಸೀದಿಗಳನ್ನು ಗುರಿಯಾಗಿಸಲು ಸ್ಥಳೀಯ ಮೌಲ್ವಿಯಿಂದ ಫತ್ವಾ ಹೊರಡಿಸಿದ್ದಾರೆ ಎಂದು ತೋರುತ್ತದೆ ಎಂದಿದ್ದಾರೆ.




