ಮನೆ ಬಾಗಿಲಿಗೆ ಹಾಕಿದ್ದ ಬೀಗ ಮುರಿದು 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಹಾಸನ: ಮನೆ ಬಾಗಿಲಿಗೆ ಹಾಕಿದ್ದ ಬೀಗ ಮುರಿದು 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಹಾಸನ ನಗರದ ಗೌರಿಕೊಪ್ಪಲಿನಲ್ಲಿ ನಡೆದಿದೆ.
ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ದೇವೇಗೌಡ ಎಂಬವರು ಗೌರಿಕೊಪ್ಪಲಿನ ಎಸ್ಬಿಐ ಬ್ಯಾಂಕ್ ಹತ್ತಿರವಿರುವ ಪ್ರಶಾಂತ್ ಎಂಬವರ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು.
ಮಕ್ಕಳಿಗೆ ಬೇಸಿಗೆ ರಜೆ ಇದ್ದರಿಂದ ಬಾಡಿಗೆ ಮನೆಗೆ ಬೀಗ ಹಾಕಿಕೊಂಡು ತಮ್ಮ ಸಂಸಾರದೊಂದಿಗೆ ಹರದನಹಳ್ಳಿ ಗ್ರಾಮಕ್ಕೆ ಹೋಗಿದ್ದರು. ಮನೆಯಲ್ಲಿ ಸಿಸಿ ಕ್ಯಾಮೆರಾ ಇದ್ದುದ್ದರಿಂದ ಹೆಂಡತಿ ಮಕ್ಕಳ ಚಿನ್ನಾಭರಣವನ್ನು ಮನೆಯ ಲಾಕರ್ನಲ್ಲಿ ಇಟ್ಟು ಬೀಗ ಹಾಕಿ ಹೋಗಿದ್ದರು.
ಮೇ 7ರಂದು ಸಂಜೆ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯ ಮುಂಬಾಲಿಗೆ ಅಳವಡಿಸಿದ್ದ ಕಬ್ಬಿಣದ ಸ್ಲೈಡಿಂಗ್ ಶೆಲ್ಟರ್ನ ಬೀಗ ತೆಗೆಯಲು ಹೋದಾಗ ಲಾಕ್ ಓಪನ್ ಆಗದೇ ಇದ್ದುದ್ದರಿಂದ ಸ್ವಲ್ಪ ತಳ್ಳಿದ್ದಾರೆ. ಬಾಗಿಲಿನ ಪಕ್ಕ ಇದ್ದ ಕಿಟಕಿಯ ಬಾಗಿಲು ತೆರೆದಿದ್ದು, ಅದರ ಮೂಲಕ ಕೈ ಹಾಕಿ ಲಾಕ್ ತೆರೆದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.




