ಸುಬ್ರಹ್ಮಣ್ಯ:ಇಬ್ಬರು ಬಾಲಕಿಯರು ಹೊಳೆಯಲ್ಲಿ ಮುಳುಗಿ ಮೃತ್ಯು: ಇಂದು ಬೆಂಗಳೂರಿನಿಂದ ಊರಿಗೆ ಬಂದಿದ್ದ ಸಹೋದರಿಯರು
ಸುಬ್ರಹ್ಮಣ್ಯ: ಬಳ್ಪ ಸಮೀಪದ ಕೇನ್ಯ ಕಣ್ಕಲ್ ಬಳಿಯ ಹೊಳೆಯಲ್ಲಿ ಮುಳುಗಿ ಸಹೋದರಿಯರಿಬ್ಬರು ನೀರು ಪಾಲಾಗಿದ್ದು ಇಬ್ಬರ ಮೃತದೇಹವೂ ಪತ್ತೆಯಾಗಿದೆ.
ಇಂದು ಸಂಜೆ ಈ ದುರ್ಘಟನೆ ಸಂಭವಿಸಿದೆ. ಮೂಲತಃ ಕಣ್ಕಲ್ ನವರಾಗಿದ್ದು ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ ( 15 ) ಮತ್ತು ಅವಂತಿಕಾ ( 11 ) ಎಂಬ ಸಹೋದರಿಯರು ನೀರು ಪಾಲಾದರು.
ಸಹೋದರಿಯರು ನೀರುಪಾಲಾದ ಸುದ್ದಿ ತಿಳಿದು ಆಗಮಿಸಿದ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದು, ರಾತ್ರಿ ವೇಳೆಗೆ ಇಬ್ಬರ ಮೃತದೇಹವೂ ಪತ್ತೆಯಾಯಿತು. ಸ್ಥಳೀಯರು ಕಾರ್ಯಾಚರಣೆಗೆ ಸಹಕರಿಸಿದರು.
ಸತೀಶ್ ಅಮ್ಮಣ್ಣಾಯ ಅವರ ಮನೆಯಲ್ಲಿ ನಾಳೆ ನಡೆಯುವ ಕಾರ್ಯಕ್ರಮವೊಂದರ ನಿಮಿತ್ತ ಈ ಮಕ್ಕಳು ತಾಯಿಯೊಂದಿಗೆ ಇಂದು ಬೆಂಗಳೂರಿನಿಂದ ಆಗಮಿಸಿದ್ದರು. ಸಂಜೆ ವೇಳೆ ಸಹೋದರಿಯರು ಸ್ನಾನಕ್ಕೆಂದು ಹೊಳೆಗೆ ಹೋಗಿದ್ದರು. ಈ ವೇಳೆ ಒಬ್ಬಾಕೆ ನೀರಿನ ಸೆಳೆತಕ್ಕೆ ಸಿಲುಕಿದಾಗ ಮತ್ತೊಬ್ಬಾಕೆ ರಕ್ಷಿಸಲು ಹೋಗಿ ಇಬ್ಬರೂ ನೀರುಪಾಲಾಗಿರಬಹುದೆಂದು ಶಂಕಿಸಲಾಗಿದೆ.





