ಬಿ.ಸಿ ರೋಡ್ ಕಾಂಗ್ರೆಸ್ ಅಭ್ಯರ್ಥಿ ಪರ ರೋಡ್ ಶೋ:
ಹರಿದು ಬಂದ ಜನ ಸಾಗರ
ಬಂಟ್ವಾಳ: ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸೋಮವಾರ ಸಂಜೆ ಬಿ.ಸಿ ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದಿಂದ ಕೈಕಂಬದವರೆಗೆ ಸಾವಿರಾರು ಕಾರ್ಯಕರ್ತರ ಜೊತೆಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.
ಪ್ರಚಾರದ ಕೊನೆಯ ದಿನವಾದ ಇಂದು ಬಿಸಿರೋಡಿನಿಂದ ಕೈಕಂಬದವರೆಗೆ ರೋಡ್ ಶೋ ನಡೆಸಿದ ಬಳಿಕ ಕೈಕಂಬದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನಲ್ಲಿ ನಡೆಯುವ ಭ್ರಷ್ಟಾಚಾರ ನಿಲ್ಲಿಸಲು ಒಟ್ಟಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸಿ. ನಾನು ನಿಮ್ಮ ಜೊತೆ ನಿಲ್ಲುತ್ತೇನೆ, ನನಗೆ ಯಾವುದೇ ಆಸೆಯಿಲ್ಲ. ಆದರೆ ನನಗೆ ಕೊನೆಯ ಚುನಾವಣೆ, ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿ ಎಂದು ಅವರು ಭಾವನಾತ್ಮಕವಾಗಿ ಮನವಿ ಮಾಡಿದರು. ಈ ಬಾರಿಯ ವಿಧಾನಸಭಾ ಚುನಾವಣೆ ವಿಶಿಷ್ಟ ಚುನಾವಣೆಯಾಗಿದ್ದು, ಬಂಟ್ವಾಳ ಕ್ಷೇತ್ರದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


ತಾಲೂಕಿಲ್ಲಿ ಸರ್ವರೀತಿಯ ಅಭಿವೃದ್ಧಿಗೆ ಕ್ಷೇತ್ರದ ಜನತೆ ಸಹಕಾರ ನೀಡಿದ ಋಣವನ್ನು ತೀರಿಸಲು ಅಸಾಧ್ಯ. ಕ್ಷೇತ್ರದ ಜನತೆಗೆ ಯಾವುದೇ ಅಗೌರವ ತೋರುವ ಕೆಲಸ ಮಾಡಿಲ್ಲ.ಈ ಬಾರಿ ಕೊನೆಯ ಅವಕಾಶ ನೀಡಿದರೆ ಈ ಹಿಂದಿಗಿಂತ ಹೆಚ್ಚಿನ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಅವರು ತಿಳಿಸಿದರು.




