July 6, 2026

ಬಿ.ಸಿ.ರೋಡ್: ನಾಪತ್ತೆಯಾಗಿದ್ದ ಮಿತ್ತಬೈಲ್‌ ಬಾಲಕನ ಮೃತದೇಹ ತಲಪಾಡಿಯ ಕುಪ್ಪಿಲದ ಕೆರೆಯಲ್ಲಿ ಪತ್ತೆ

0
image_editor_output_image713522288-1680995969523.jpg

ಬಂಟ್ವಾಳ: ಬಿ.ಸಿ.ರೋಡು ಸಮೀಪದ ಮಿತ್ತಬೈಲು ನಿವಾಸಿ ಶಾಲಾ ಬಾಲಕ ಅಝೀಂ ಮೃತದೇಹ ಶನಿವಾರ ರಾತ್ರಿ ಕಳ್ಳಿಗೆ ಗ್ರಾಮದ ಕುಪ್ಪಿಲ ಎಂಬಲ್ಲಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ಯೆಯಾಗಿದೆ.

ಸ್ಥಳೀಯ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ, ಬಿ.ಸಿ.ರೋಡಿನ ಖಾಸಗಿ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಅಝೀಂ (13) ಎಂಬಾತನೇ ಮೃತ ಬಾಲಕ.

ಶನಿವಾರ ಮಧ್ಯಾಹ್ನದ ವೇಳೆಗೆ ಪಾಣೆಮಂಗಳೂರು ಅಜ್ಜಿ ಮನೆಗೆ ಬಂದಿದ್ದ ಬಾಲಕ ಅಲ್ಲಿ ತನ್ನ ಸ್ನೇಹಿತರೊಂದಿಗೆ ಇದ್ದುದನ್ನು ಆ ಪರಿಸರದ ಮಂದಿ ಗಮನಿಸಿದ್ದರು, ಆದರೆ ಮಧ್ಯಾಹ್ನದ ಬಳಿಕ ಬಾಲಕ ಹಠಾತ್ ಕಾಣೆಯಾಗಿದ್ದ.

ಬಾಲಕನನ್ನು ಸಂಪರ್ಕಿಸಲು ಮನೆಮಂದಿ ಸಾಕಷ್ಟು ಪ್ರಯತ್ನಿಸಿದ್ದರೂ ಸಫಲರಾಗಿರಲಿಲ್ಲ ಎನ್ನಲಾಗಿದೆ. ಬಾಲಕನ ಕೈಯಲ್ಲಿದ್ದ ಮೊಬೈಲ್ ರಿಂಗಿಣಿಸುತ್ತಿದ್ದರೂ

ಕರೆ ಸ್ವೀಕಾರ ಆಗದ ಹಿನ್ನಲೆಯಲ್ಲಿ ಆತಂಕಗೊಂಡ ಮನೆ ಮಂದಿ ಬಂಟ್ವಾಳ ನಗರ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು.

ಪೊಲೀಸರು ಬಾಲಕನ ಕೈಯಲ್ಲಿದ್ದ ಮೊಬೈಲ್ ಟ್ರೇಸ್ ಮಾಡಿದಾಗ ದೊರೆತ ಮಾಹಿತಿಯಂತೆ ಕಳ್ಳಿಗೆ ಗ್ರಾಮದ ಕೆರೆಯ ಬಳಿ ಹುಡುಕಾಟ ನಡೆಸಿದಾಗ ಕೆರೆಯ ಮೇಲ್ಭಾಗದಲ್ಲಿ ಬಾಲಕ ಧರಿಸಿದ್ದ ವಸ್ತ್ರ, ಪಾದರಕ್ಷೆ ಹಾಗೂ ಮೊಬೈಲ್ ಪತ್ತೆಯಾಗಿದೆ. ಬಳಿಕ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಬಾಲಕನ ಮೃತದೇಹ ತಡರಾತ್ರಿ ವೇಳೆ ಪತ್ತೆಯಾಗಿದೆ.

ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

ಬಾಲಕನೊಂದಿಗೆ ಇತರ ಸ್ನೇಹಿತರು ಸೇರಿ ಹೋಗಿದ್ದಾರಾ ಅಥವಾ ಬಾಲಕ ಓರ್ವನೇ ಈಜಾಟಕ್ಕೆ ಹೋಗಿದ್ದಾನಾ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!