ಉಳ್ಳಾಲ: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಮೃತ್ಯು
ಉಳ್ಳಾಲ: ಫೆ.14 ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಫೆ. 19 ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕುಂಪಲ ಆಶ್ರಯ ಕಾಲನಿಯಲ್ಲಿ ವಾಸವಿರುವ ತಮಿಳುನಾಡು ಮೂಲದ ಸೋಮನಾಥ ಮತ್ತು ಭವ್ಯ ದಂಪತಿಯ ಹಿರಿಯ ಪುತ್ರಿ ಧನ್ಯ (17) ಮೃತ ವಿದ್ಯಾರ್ಥಿನಿ.
ಇನ್ನು ಫೆ.14 ರಂದು ಮಧ್ಯಾಹ್ನ ಧನ್ಯ ಅವರ ತಾಯಿ ಭವ್ಯ ಮನೆಗೆ ತೆರಳಿದಾಗ ರಜೆಯಲ್ಲಿದ್ದ ಮಗಳು ಮನೆಯಲ್ಲಿರಲಿಲ್ಲ. ಮಧ್ಯಾಹ್ನ 3 ಗಂಟೆಗೆ ಧನ್ಯ ಮನೆಗೆ ಮರಳಿದ್ದು, ಈ ವೇಳೆ ತಾಯಿ ಮಗಳಲ್ಲಿ ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನಿಸಿದ್ದು, ಆಕೆ ಗೆಳತಿ ಮನೆಗೆ ಓದಲು ತೆರಳಿದ್ದೆ ಎಂದಿದ್ದಾಳೆ. ಗೆಳತಿ ಮನೆಗೆ ಹೋಗುವಾಗ ಫೋನ್ ಕರೆ ಏಕೆ ಮಾಡಿಲ್ಲ ಎಂದು ತಾಯಿ ಗದರಿ ಎರಡೇಟು ಹೊಡೆದಿದ್ದರಂತೆ.
ತಾಯಿ ಬಳಿಕ ಸಮೀಪದ ಮನೆಗೆ ಕೆಲಸಕ್ಕೆ ತೆರಳಿದ್ದು, ಈ ವೇಳೆ ಧನ್ಯ ಮನೆಯೊಳಗಿದ್ದ ಗೆದ್ದಲು ಹೊಡೆಯುವ ಕೀಟ ನಾಶಕ ಸೇವಿಸಿ ತೀರಾ ಅಸ್ವಸ್ಥಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಳೆ.




