ದಾವಣಗೆರೆ: ಹೊಸ ತಿರುವು ಪಡೆದುಕೊಂಡ ಹಿಟ್ ಆ್ಯಂಡ್ ರನ್ ಕೇಸ್: ದರೋಡೆ ಮಾಡಿ ಪರಾರಿಯಾಗುವ ವೇಳೆ ಅಪಘಾತ
ದಾವಣಗೆರೆ: ರಸ್ತೆ ದುರಂತದಲ್ಲಿ ಮೂರು ಜನ ಯುವಕರ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಫೆ.11ರಂದು ದಾವಣಗೆರೆ ತಾಲೂಕಿನ ಆನಗೋಡು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಎರಡು ದ್ವಿಚಕ್ರವಾಹನದಲ್ಲಿ ಒಟ್ಟು ಆರು ಜನ ಸೇರಿ ಲಾರಿ ದರೋಡೆ ಮಾಡಲು ಯತ್ನಿಸಿದ್ದ ಯುವಕರ ಪೈಕಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ದರೋಡೆಗೊಳಗಾದ ಲಾರಿ ಚಾಲಕನೇ ಉದ್ದೇಶಪೂರ್ವಕವಾಗಿ ಮೂರು ಜನ ಯುವಕರ ಮೇಲೆ ಲಾರಿ ಹತ್ತಿಸಿ ಪ್ರಾಣ ತೆಗೆದಿದ್ದಾನೆ ಎಂದು ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ರಾತ್ರಿ ಹೊತ್ತು ಹೆದ್ದಾರಿಯಲ್ಲಿ ತಂಗಿದ್ದ ಲಾರಿಯನ್ನು ರಾಬರಿ ಮಾಡಲು ತೆರಳಿದ್ದ ಆರು ಜನ ಯುವಕರು, ಲಾರಿ ಚಾಲಕನ ಹಲ್ಲೆ ನಡೆಸಿ ಮೊಬೈಲ್ ಹಾಗೂ ಎಂಟು ಸಾವಿರ ಹಣವನ್ನು ಕಸಿದುಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದಾರೆ.
ಯುವಕರ ಬೈಕ್ಗಳನ್ನು ಹಿಂಬಾಲಿಸಿದ ಲಾರಿ ಚಾಲಕ ಮೊದಲು ಸ್ಪೆಂಡ್ಲರ್ ಬೈಕ್ಗೆ ಗುದ್ದಿ 3 ಯುವಕರನ್ನು ಪುಟ್ಪಾತ್ ಮೇಲೆ ಬೀಳಿಸಿದ್ದಾನೆ, ನಂತರ ಮುಂದೆ ಹೋಗುತ್ತಿದ್ದ ಡಿಯೋ ಬೈಕ್ಗೆ ಗುದ್ದಿ ಆ ಬೈಕ್ನಲ್ಲಿದ್ದ ಯುವಕರನ್ನು ಬೀಳಿಸಿ ಅವರ ಮೇಲೆ ಲಾರಿ ಹತ್ತಿಸಿಕೊಂಡು ಹೋಗಿದ್ದಾನೆ.
ಈ ಘಟನೆಯಲ್ಲಿ ಆರು ಜನ ಯುವಕರ ಪೈಕಿ ಪರಶುರಾಮ್ (24) ಸಂದೇಶ (23) ಹಾಗೂ ಶಿವಕುಮಾರ (26) ಎಂಬ ಯುವಕರು ಸಾವನ್ನಪ್ಪಿದ್ದರು, ಇನ್ನುಳಿದ ಮೂರು ಜನ ಯುವಕರು ಗಾಯಗೊಂಡಿದ್ದರು.
ಈ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ದಾವಣಗೆರೆ ಪೊಲೀಸರು, ಮೂವರು ಮಯುವಕರ ಮೇಲೆ ಲಾರಿ ಹತ್ತಿಸಿ ಚೆನ್ನೈಗೆ ಪರಾರಿಯಾಗಿದ್ದ ಉತ್ತರ ಪ್ರದೇಶ ಮೂಲದ ಲಾರಿ ಚಾಲಕ ಬೋಲಾ ಯಾದವ್ (25)ನನ್ನು ದಾವಣಗೆರೆ ಪೊಲೀಸರು ಚೆನ್ನೈನಲ್ಲಿ ಲಾರಿ ಸಮೇತ ಬಂಧಿಸಿದ್ದಾರೆ.
ಇತ್ತ ಲಾರಿ ದರೋಡೆ ಮಾಡಿದ್ದ ಆರು ಜನರ ಪೈಕಿ ಗಾಯಗೊಂಡಿದ್ದ ಗಣೇಶ್, ರಾಹುಲ್, ನಾಗರಾಜ್ ಎಂಬ ಯುವಕರನ್ನು ಪೊಲೀಸರು ಬಂಧಿಸಿ ದರೋಡೆ ಪ್ರಕರಣವನ್ನು ದಾಖಲು ಮಾಡಿದ್ದಾರೆ.




