ಲಾಡ್ಜ್ ನಲ್ಲಿ ಚಾಲಕನ ಮೃತದೇಹ ಪತ್ತೆ: ಕೊಲೆ ಶಂಕೆ
ಬೆಂಗಳೂರು: ಕೆಂಗೇರಿಯ ಲಾಡ್ಜ್ ನಲ್ಲಿ ಬಿಎಂಟಿಸಿ ಚಾಲಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಚನ್ನಪಟ್ಟಣ ಮೂಲದ ಚಾಲಕ ಪುಟ್ಟೇಗೌಡ ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಆರೋಪ ಕೇಳಿಬಂದಿದೆ. ಕಳೆದ ಆರು ತಿಂಗಳಿನಿಂದ ಬಿಎಂಟಿಸಿ ಚಾಲಕನಾಗಿ ಇವರು ಕೆಲಸ ಮಾಡುತಿದ್ದರು.
ಸೋಮವಾರ ಬೆಳಿಗ್ಗೆ ಏಳು ಗಂಟೆಯ ಸಮಯದಲ್ಲಿ ಕೆಲಸಕ್ಕೆ ಹೋಗಿ ಬರ್ತಿನಿ ಎಂದು ತಿಳಿಸಿ ಮನೆ ಬಿಟ್ಟು ಹೋಗಿದ್ದರು.
ಚಾಲಕನ ಸಾವಿನ ಹಿಂದೆ ಯುವತಿಯೊಬ್ಬಳ ಕೈವಾಡವಿದೆ ಎನ್ನಲಾಗ್ತಿದೆ. ಕೆಂಗೇರಿಯ ಲಾಡ್ಜ್ಗೆ ಯುವತಿಯೊಂದಿಗೆ ಪುಟ್ಟೆಗೌಡ ಬಂದಿದ್ದರು. ಸ್ವಲ್ಪ ಸಮಯದ ಬಳಿಕ ಯುವತಿ ಡೋರ್ ಲಾಕ್ ಮಾಡಿ ಹೊರಹೋಗಿದ್ದಾಳಂತೆ.
ಹಣ ಬಾಕಿ ಇರುವ ಕಾರಣ ರೂಂ ಒಳಗೆ ಸಿಬ್ಬಂದಿ ಹೋದಾಗ ಪುಟ್ಟೆಗೌಡರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ತಿಳಿದುಬಂದಿದೆ. ಆದರೆ ಪುಟ್ಟೇಗೌಡೊಂದಿಗೆ ಲಾಡ್ಜ್ಗೆ ಬಂದ ಯುವತಿ ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.




