ಕನ್ಯಾನ: ಹಿಂದು ರುದ್ರಭೂಮಿ ವಿಚಾರದಲ್ಲಿ ಬಿಜೆಪಿಯಿಂದ ಕೋಮು ಭಾವನೆ ಕೆರಳಿಸುವ ಹುನ್ನಾರ: ಎಂ ಎಸ್ ಮಹಮ್ಮದ್ ಆರೋಪ
ವಿಟ್ಲ; ಕನ್ಯಾನ ಗ್ರಾಮ ಪಂಚಾಯಿತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ಸಿಗದ ಸಂದರ್ಭ 14 ಕಾಂಗ್ರೆಸ್ ಹಾಗೂ 9 ಬಿಜೆಪಿ ಸದಸ್ಯರ ಪೂರ್ಣ ಹಾಜರಾತಿಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯವನ್ನು ಪಡೆದು ಸ್ಮಶಾನ ಜಾಗದಿಂದ 1 ಎಕ್ರೆ ಜಾಗವನ್ನು ಕಡಿತಮಾಡಲಾಗಿತ್ತು. ಶಾಂತವಾಗಿರುವ ಕನ್ಯಾನದಲ್ಲಿ ಕೋಮು ಭಾವನೆ ಕೆರಳಿಸುವ ಅಜೆಂಡವನ್ನು ಬಿಜೆಪಿ ಇಟ್ಟುಕೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ಎಸ್. ಮಹಮ್ಮದ್ ಹೇಳಿದರು.
ಕನ್ಯಾನದ ಸರ್ವೇ ನಂಬರ್ 291/1ಎ2ಎ1ಬಿ ರಲ್ಲಿ ಗ್ರಾಮ ಪಂಚಾಯಿತಿ ಸ್ವಂತ ನಿಧಿ, 14 ಹಾಗೂ 15 ನೇ ಹಣಕಾಸು ಯೋಜನೆಯಲ್ಲಿ 20 ಲಕ್ಷಕ್ಕೂ ಅಧಿಕ ವೆಚ್ಚವನ್ನು ಖರ್ಚು ಮಾಡಿ ಸುಸಜ್ಜಿತವಾದ ಸ್ಮಶಾನವನ್ನು ನಿರ್ಮಾಣ ಮಾಡಿದೆ. ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಮಾಡಿದ ಬಳಿಕ ಅದನ್ನು ವಿರೋಧಿಸಿ ಪ್ರತಿಭಟಿಸುವವರಿಗೆ ಆಡಳಿತ ವ್ಯವಸ್ಥೆಯ ಮಾಹಿತಿ ಕೊರತೆ ಇದೆ ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕನ್ಯಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಪಿ. ಅಬ್ದುಲ್ ರಹಿಮಾನ್ ಮಾತನಾಡಿ ಶಿರಂಕಲ್ಲು ವಾರ್ಡ್ ನಲ್ಲಿ ಸರ್ವೆ ನಂಬರ್ 439/ಎ ಯಲ್ಲಿ 2.10ಎಕ್ರೆ ಹಾಗೂ ಸರ್ವೇ ನಂಬರ್ 291/1ಎ2ಎ1ಬಿ ಯಲ್ಲಿ 2.25 ಜಾಗವಿದೆ. ಇದರ ಜತೆಗೆ ಸರ್ವೇ ನಂಬರ್ 285/1ರಲ್ಲಿ 1.25ಎಕ್ರೆ, 119/1ರಲ್ಲಿ 2.20ಎಕ್ರೆ, 402/1ಎ1ರಲ್ಲಿ 1.75ಎಕ್ರೆ, 424/2ರಲ್ಲಿ 1.30 ಎಕ್ರೆ ಸೇರಿ ಕನ್ಯಾನದಲ್ಲಿ ಒಟ್ಟು 10.85ಎಕ್ರೆಯನ್ನು ಸ್ಮಶಾನಕ್ಕಾಗಿ ಖಾಯ್ದಿರಿಸಿದ್ದು, ತ್ಯಾಜ್ಯ ಘಟಕಕ್ಕೆ 0.78 ಎಕ್ರೆಯನ್ನು ಕಡಿತ ಮಾಡಿದ ಬಳಿಕವೂ ಗ್ರಾಮದಲ್ಲಿ ಹಿಂದು ರುದ್ರಭೂಮಿಗೆ 10ಎಕ್ರೆಗೂ ಅಧಿಕ ಜಾಗವಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ದೇವಕಿ, ಗಣೇಶ್ ಕುಮಾರ್, ಮೊಯಿದು ಕುಂಞಿ ಮಂಡ್ಯೂರು ಉಪಸ್ಥಿತರಿದ್ದರು.




