ಪಂಚರತ್ನ ಕಾರ್ಯಕ್ರಮದಲ್ಲಿ ಕುಸಿದು ಬಿದ್ದು ಜೆಡಿಎಸ್ ಅಭ್ಯರ್ಥಿ ಮೃತ್ಯು
ವಿಜಯಪುರ: ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ಶಿವಾನಂದ್ ಪಾಟೀಲ್ ಸೋಮಜಾಳ ನಿಧನರಾಗಿದ್ದಾರೆ.
ಹೃದಯಾಘಾತದಿಂದ ಶಿವಾನಂದ್ ಪಾಟೀಲ್ ಸೋಮಜಾಳ (54) ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ. ನಾಗಠಾಣ ಮತಕ್ಷೇತ್ರ ದಲ್ಲಿ ನಡೆದ ಪಕ್ಷದ ಪಂಚರತ್ನ ಕಾರ್ಯಕ್ರಮದಲ್ಲಿ ಹೆಚ್ಡಿಕೆಯೊಂದಿಗೆ ಶಿವಾನಂದ್ ಭಾಗಿಯಾಗಿದ್ದರು.
ನಂತರ ಸಂಜೆ ಸಿಂದಗಿ ಪಟ್ಟಣಕ್ಕೆ ತೆರಳಿದ್ದರು. ರಾತ್ರಿ 9 ರ ವೇಳೆ ಅಸ್ವಸ್ಥಗೊಂಡ ಶಿವಾನಂದ್ ಪಾಟೀಲ್ ಸೋಮಜಾಳ, ಸಿಂದಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ತೀವ್ರ ಹೃದಯಾಘಾತದಿಂದ ಶಿವಾನಂದ್ ಕೊನೆಯುಸಿರೆಳೆದರು. ಶಿವಾನಂದ್ 16 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾ ಗಿದ್ದರು. ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸೋಮಜಾಳ ಗ್ರಾಮದ ಮೂಲದವರಾಗಿರುವ ಇವರು, ಪತ್ನಿ ವಿಶಾಲಾಕ್ಷಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.




