ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮತ್ತೆ ಇಬ್ಬರ ಪತ್ತೆಗೆ ಬಹುಮಾನ ಘೋಷಿಸಿದ ಎನ್ಐಎ
ಮಂಗಳೂರು: ಜುಲೈ 26 ರಂದು ಭೀಕರವಾಗಿ ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ದಳ(ಎನ್ಐಎ ) ಮುಂದಾಗಿದ್ದು ಆರೋಪಿಗಳ ಕುರಿತು ಸುಳಿವು ನೀಡಿದವರಿಗೆ ಐದು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕಾರಿ ಸಮಿತಿ ಸದಸ್ಯ ಬಂಟ್ವಾಳ ತಾಲೂಕಿನ ಕೊಡಾಜೆಯ ಮಹಮ್ಮದ್ ಶರೀಪ್ (48) ಹಾಗೂ ನೆಕ್ಕಿಲಾಡಿಯ ಮಸೂದ್ ಪತ್ತೆಗೆ ಎನ್ಐಎ 5ಲಕ್ಷ ರೂ ಬಹುಮಾನ ಘೋಷಣೆ ಮಾಡಿದ್ದು, ಸುಳಿವು ನೀಡಿದವರ ಮಾಹಿತಿ ಗೌಪ್ಯವಾಗಿ ಇಡೋದಾಗಿ ರಾಷ್ಟ್ರೀಯ ತನಿಖಾ ದಳ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಈ ಹಿಂದೆ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದ ನಾಲ್ವರು ಅರೋಪಿಗಳ ಸುಳಿವು ನೀಡಿದವರಿಗೆ ಎನ್ಐಎ ಒಟ್ಟು 14 ಲಕ್ಷ ನಗದು ಬಹುಮಾನ ಘೋಷಣೆ ಮಾಡಿತ್ತು. ಮೊಹಮ್ಮದ್ ಮುಸ್ತಫಾಗೆ 5 ಲಕ್ಷ, ತುಫೈಲ್ ಗೆ 5 ಲಕ್ಷ, ಉಮರ್ ಫಾರೂಕ್ ಗೆ 2 ಲಕ್ಷ, ಅಬುಬಕರ್ ಸಿದ್ದಿಕ್ ಗೆ 2 ಲಕ್ಷ ಘೋಷಿಸಿತ್ತು.




