ಕ್ವಾರಿಯಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಪತ್ತೆ
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಅಸನ್ಸೋಲ್ನಲ್ಲಿ ಭಾನುವಾರ ರಾತ್ರಿ ಕ್ವಾರಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆಯಾಗಿವೆ. ಮೃತರು ಜನವರಿ 10 ರಿಂದ ನಾಪತ್ತೆಯಾಗಿದ್ದರು.
ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ ನಂತರ ಇದು ಆತ್ಮಹತ್ಯೆ ಎಂದು ತಿಳಿಸಿದ್ದಾರೆ. ಆದರೆ, ಸಂಬಂಧಿಕರು ಸಾವಿನ ಹಿಂದೆ ದುಷ್ಕೃತ್ಯ ನಡೆದಿರುವುದಾಗಿ ಶಂಕಿಸಿದ್ದಾರೆ.
ನಾಲ್ವರ ಮೃತ ದೇಹಗಳನ್ನು ಬಿಜೋಯ್ ರಾವುತ್ (41), ಅವರ ಪತ್ನಿ ಮಿಥು ರಾವುತ್ (35) ಮತ್ತು ಅವರ ಇಬ್ಬರು ಮಕ್ಕಳಾದ ಲಾಡೋ (2) ಮತ್ತು ಕೃಷ್ಣ (11) ಎಂದು ಗುರುತಿಸಲಾಗಿದ್ದು, ಕಲ್ಲು ತೆಗೆಯಲು ಅಗೆದಿದ್ದ ಕ್ವಾರಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡುಬರುತ್ತದೆ. ಆದರೆ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ವರದಿ ಬಂದ ನಂತರ ನಾವು ಸಾವಿಗೆ ನಿಖರವಾದ ಕಾರಣವನ್ನು ತಿಳಿಯಲು ಸಾಧ್ಯವಾಗುತ್ತದೆ. ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿತ್ತು. ಇದು ಆತ್ಮಹತ್ಯೆಗೆ ಕಾರಣವಾಗಿರಬಹುದು’ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.




