ವಿಶ್ವವಿದ್ಯಾಲಯದ ಕಟ್ಟಡದ ಗೋಡೆಗಳ ಮೇಲೆ “ಬ್ರಾಹ್ಮಣರು ಕ್ಯಾಂಪಸ್ ತೊರೆಯಿರಿ” ಬರಹ ಪತ್ತೆ
ನವದೆಹಲಿ: ಜವಹರಲಾಲ್ ನೆಹರು ವಿಶ್ವ ವಿದ್ಯಾಲಯ ಈಗ ಮತ್ತೆ ಸುದ್ದಿಯಲ್ಲಿದ್ದು, ಕ್ಯಾಂಪಸ್ನ ಗೋಡೆಗಳ ಮೇಲೆ ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳ ವಿರುದ್ಧ ಘೋಷಣೆಗಳನ್ನು ಬರೆಯಲಾಗಿದೆ. ಕಳೆದ ರಾತ್ರಿ ಸ್ಕೂಲ್ ಆಫ್ ಇಂಟರ್ನ್ಯಾಶನಲ್ ಸ್ಟಡೀಸ್- II ಕಟ್ಟಡದ ಗೋಡೆಗಳ ಮೇಲೆ ಬರಹಗಳು ಕಂಡು ಬಂದಿವೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕುಲಪತಿ ಶಾಂತಿಶ್ರೀ ಡಿ. ಪಂಡಿತ್ ವಿಭಾಗದ ಕುಂದುಕೊರತೆಗಳ ಸಮಿತಿಯ ಡೀನ್ ಅವರಿಂದ ಈ ಬಗ್ಗೆ ವರದಿ ಕೇಳಿದ್ದಾರೆ. ಅಲ್ಲದೇ ಕ್ಯಾಂಪಸ್ನಲ್ಲಿ ಈ ಪ್ರತ್ಯೇಕವಾದ ಪ್ರವೃತ್ತಿಯನ್ನು ಖಂಡಿಸುತ್ತೇವೆ. ಜೆಎನ್ಯು ಎಲ್ಲರಿಗೂ ಸೇರಿದ್ದು, ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಕಾಲೇಜಿನ ಅಡ್ಮಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎರಡು ಸಮುದಾಯಗಳ ವಿರುದ್ಧದ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಬ್ರಾಹ್ಮಣರು ಕ್ಯಾಂಪಸ್ ತೊರೆಯಿರಿ”, “ರಕ್ತವಿದೆ”, “ಬ್ರಾಹ್ಮಣ ಭಾರತ್ ಛೋಡೋ” ಮತ್ತು “ಬ್ರಾಹ್ಮಿನೋ-ಬನಿಯಾಸ್, ನಾವು ನಿಮಗಾಗಿ ಬರುತ್ತಿದ್ದೇವೆ! ನಾವು ಸೇಡು ತೀರಿಸಿಕೊಳ್ಳುತ್ತೇವೆ” ಎಂದು ಬರೆಯಲಾಗಿದೆ.