ಐಸಿಸ್ ಸಂಘಟನೆ ಜತೆ ನಂಟು
ಆರೋಪ: ಆರೋಪಿಯನ್ನು ಮಂಗಳೂರಿಗೆ ಕರೆ ತಂದು ನಾನಾ ಕಡೆ ಮಹಜರು ನಡೆಸಿದ ಪೊಲೀಸರು
ಬಂಟ್ವಾಳ: ಐಸಿಸ್ ಸಂಘಟನೆ ಜತೆ ನಂಟು ಹೊಂದಿರುವ ಆರೋಪದಲ್ಲಿ ಶಿವಮೊಗ್ಗ ಪೊಲೀಸರು ಬಂಧಿಸಿರುವ ಮಾಝ್ ಮುನೀರ್ ಅಹಮ್ಮದ್ ನನ್ನು ಬುಧವಾರ ಮಂಗಳೂರಿಗೆ ಕರೆತಂದು ಜಿಲ್ಲೆಯ ನಾನಾ ಕಡೆ ಮಹಜರು ನಡೆಸಲಾಗಿದೆ.
ಶಂಕಿತ ಉಗ್ರರ ಜಾಲದ ಆರೋಪದಲ್ಲಿ ಪೊಲೀಸರು ಶಿವಮೊಗ್ಗ ಸೈಯದ್ ಯಾಸಿನ್ (21), ಮಾಝ್ ಮುನೀರ್ ಅಹಮ್ಮದ್ (24)ನನ್ನು ಬಂಧಿಸಿದ್ದರು.
ಪ್ರಕರಣದ ಇನ್ನೋರ್ವ ಆರೋಪಿ ತೀರ್ಥಹಳ್ಳಿಯ ಮಹಮ್ಮದ್ ಶಾರೀಕ್ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ. ಶಾರೀಕ್ ಮತ್ತು ಮಾಝ್ ಮಂಗಳೂರಿನ ಬಿಜೈ, ಕೋರ್ಟ್ ರಸ್ತೆ, ಪಂಪ್ವೆಲ್ನಲ್ಲಿ ಕಳೆದ ಡಿಸೆಂಬರ್ನಲ್ಲಿ ಪತ್ತೆಯಾದ ಉಗ್ರ ಪರ ಗೋಡೆ ಬರಹದ ಆರೋಪಿಗಳಾಗಿದ್ದಾರೆ.
ಜಿಲ್ಲೆಯ ನಾನಾ ಕಡೆ ಮಹಜರು: ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡ ಶಂಕಿತ ಉಗ್ರ ಮಾಝ್ನನ್ನು ಮಂಗಳವಾರ ರಾತ್ರಿ ಮಂಗಳೂರಿಗೆ ಕರೆದುಕೊಂಡು ಬಂದು, ಬುಧವಾರ ಜಿಲ್ಲೆಯ ನಾನಾ ಕಡೆ ಮಹಜರು ನಡೆಸಿದೆ.
ಮಾಝ್ ಮಂಗಳೂರಿನಲ್ಲಿ ವಾಸ್ತವ್ಯ ವಿದ್ದ ಆರ್ಯ ಸಮಾಜದ ಬಳಿಯ ಫ್ಲ್ಯಾಟ್ನ್ನು ಮಂಗಳವಾರ ರಾತ್ರಿ ಶೋಧ ನಡೆಸಿದ್ದಾರೆ. ಇದು ಮಾತ್ರವಲ್ಲದೆ ಬುಧವಾರ ದ.ಕ. ಜಿಲ್ಲೆಯ ನಾನಾ ಕಡೆ ಮಹಜರು ನಡೆಸಿದ್ದಾರೆ.
ಮಾಝ್ ಮಂಗಳೂರಿನಲ್ಲಿ ವಾಸ್ತವ್ಯವಿದ್ದ. ಇಂದು ತನಿಖಾ ತಂಡ ಆರೋಪಿ ಜತೆ ನಾವೂರ ಸುಲ್ತಾನ್ಕಟ್ಟೆಗೆ ತೆರಳಿ ಮಹಜರು ನಡೆಸಿದೆ. ಇದು ಮಾತ್ರವಲ್ಲದೆ ಇನ್ನು ಕೆಲವೆಡೆ ಸ್ಥಳ ಪರಿಶೀಲನೆ ನಡೆಸಿರುವ ಮಾಹಿತಿ ಲಭಿಸಿದೆ. ತನಿಖಾ ತಂಡದ ಜತೆ ಶ್ವಾನದಳ, ಬಾಂಬು ನಿಷ್ಕ್ರಿಯ ದಳ ಕೂಡಾ ಇತ್ತೆಂದು ತಿಳಿದು ಬಂದಿದೆ.





