ಉಪನ್ಯಾಸಕರು ಎದುರೇ ಕ್ಲಾಸ್ ರೂಂನಲ್ಲಿ ರಾಡ್ ಹಿಡಿದು ಹೊಡೆದಾಡಿಕೊಂಡ ವಿದ್ಯಾರ್ಥಿಗಳು
ರಾಯಚೂರು: ಕ್ಲಾಸ್ ರೂಂನಲ್ಲಿಯೇ ಉಪನ್ಯಾಸಕರ ಎದುರೇ ರಾಡ್ ಹಿಡಿದು ವಿದ್ಯಾರ್ಥಿಗಳು ಹೊಡೆದಾಡಿಕೊಂಡಿರುವ ಘಟನೆ ರಾಯಚೂರಿನ ನವೋದಯ ವಿದ್ಯಾ ಸಂಸ್ಥೆಯಲ್ಲಿ ನಡೆದಿದೆ.
ಶಂಕರ್ ಮತ್ತು ಶಂಭುಲಿಂಗ ಗಾಯಗೊಂಡ ವಿದ್ಯಾರ್ಥಿಗಳಾಗಿದ್ದು, ಇಬ್ಬರ ಮೇಲೂ ರಾಡ್ನಿಂದ ರೋಹಿತ್ ಹಲ್ಲೆ ನಡೆಸಿದ್ದಾನೆ. ಈ ಮೂವರೂ ಬಿಎಸ್ಸಿ ನರ್ಸಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ.
ಆಗಾಗ ಶಂಭುಲಿಂಗ, ಶಂಕರ್ ರೇಗಿಸುತ್ತಿದರೂ ಸಹಿಸಿಕೊಂಡಿದ್ದ ರೋಹಿತ್ ತನ್ನ ತಾಯಿ ಬರ್ತ್ಡೇಗೆ ಸ್ಟೇಟಸ್ ಹಾಕಿದ್ದ.
ಆದರೆ ರೋಹಿತ್ ತಾಯಿಯ ಫೋಟೋವನ್ನು ಶಂಕರ್ ಮತ್ತು ಶಂಭುಲಿಂಗ ದುರ್ಬಳಕೆ ಮಾಡಿದ ಆರೋಪದಿಂದ ರೊಚ್ಚಿಗೆದ್ದ ರೋಹಿತ್ ಕಾಲೇಜಿನ ಟೆರೆಸ್ ಮೇಲಿದ್ದ ರಾಡ್ ತೆಗೆದುಕೊಂಡು ಬಂದು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಉಪನ್ಯಾಸಕರ ಕಣ್ಣೆದುರೇ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ.
ಈ ಘಟನೆಯು ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.




