ತಿಂಗಳಾಡಿ: ಮಹಿಳೆಯ ಮಾನಭಂಗ ಯತ್ನ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ
ಪುತ್ತೂರು: ತಿಂಗಳಾಡಿಯಲ್ಲಿ ಅಂಗಡಿಗೆ ಬಂದಿದ್ದ ಮಹಿಳೆಯೋರ್ವರ ಮಾನಭಂಗ ಮಾಡಿದ ಪ್ರಕರಣದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸರ್ವೆ ನೇರೋಳ್ತಡ್ಕ ನಿವಾಸಿ ಮಹಿಳೆಯೋರ್ವರು ತಿಂಗಳಾಡಿಯಲ್ಲಿರುವ ನ್ಯೂ ಸುಪರ್ ಬಝಾರ್ ಜನರಲ್ ಸ್ಟೋರ್ ಅಂಗಡಿಗೆ ಸಾಮಾನು ಖರೀದಿಗೆ ಬಂದಿದ್ದ ವೇಳೆ ಅಂಗಡಿಯಲ್ಲಿದ್ದ, ಸೊರಕೆ ಆದಂ ಎಂಬವರ ಮಗ ಬದ್ರುದ್ದೀನ್ ಯಾನೆ ಬದ್ರು ಎಂಬಾತ ಮಹಿಳೆಯ ಸೊಂಟಕ್ಕೆ ಕೈಹಾಕಿ ಮಾನಭಂಗ ಮಾಡಿದ್ದಾಗಿ ಆರೋಪಿಸಲಾಗಿದೆ. ಮಹಿಳೆ ಬೊಬ್ಬೆ ಹೊಡೆದು ಜನ ಸೇರುತ್ತಿದ್ದಾಗ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದ. ನಂತರದ ಬೆಳವಣಿಗೆಯಲ್ಲಿ ನೂರಾರು ಹಿಂದೂ ಕಾರ್ಯಕರ್ತರು, ಸಂಘಟನೆ ಪ್ರಮುಖರು ಜಮಾಯಿಸಿ ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದರು. ಸೆ.15ರ ಬೆಳಿಗ್ಗೆ 8 ಗಂಟೆ ಮೊದಲು ಆರೋಪಿಯನ್ನು ಬಂಧಿಸದೇ ಇದ್ದಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು.
ಪುತ್ತೂರು ಗ್ರಾಮಾಂತರ ಪೊಲೀಸರು ರಾತ್ರಿ ವೇಳೆಯೇ ಆರೋಪಿ ಬದ್ರುದ್ದೀನ್ನನ್ನು ಬಂಧಿಸಿದ್ದರು.ಆರೋಪಿಯನ್ನು ಸೆ.15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆ.22ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.




