ವಿಟ್ಲದಲ್ಲಿ ಕಾಂಗ್ರೆಸ್ ಪಾದಯಾತ್ರೆ ಸಮಾರೋಪ: ದೇಶವನ್ನು ಭಾಷೆ, ಜಾತಿ ಹೆಸರಿನಲ್ಲಿ ಒಡೆಯುವ ಕೆಲಸವಾಗುತ್ತಿದೆ: ನಿಕೇತ್ರಾಜ್ ಮೌರ್ಯ
ವಿಟ್ಲ: ದೇಶವನ್ನು ಭಾಷೆ, ಜಾತಿ ಹೆಸರಿನಲ್ಲಿ ಒಡೆಯುವ ಕೆಲಸವಾಗುತ್ತಿದೆ. ದೇಶದಲ್ಲಿ ಜನರಿಗೆ ರಾಷ್ಟ್ರ ಪ್ರಜ್ಞೆಯನ್ನು ಬೆಳೆಸುವ ಕೆಲಸವಾಗಬೇಕು. ಮನಸ್ಸು ಶುದ್ದವಾಗಿರಬೇಕಾದರೆ ಕರ್ಮ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ನಿಕೇತ್ರಾಜ್ ಮೌರ್ಯ ಹೇಳಿದರು.

ಅವರು ಪುತ್ತೂರು ಮತ್ತು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಮೃತ ಮಹೋತ್ಸವದ ಪ್ರಯುಕ್ತ ಸೋಮವಾರ ಪುತ್ತೂರು – ದರ್ಬೆಯಿಂದ ವಿಟ್ಲದ ತನಕ ನಡೆದ ಸ್ವಾತಂತ್ರ್ಯೋತ್ಸವ ನಡಿಗೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದೇಶದಲ್ಲಿ ಜನರಿಗೆ ರಾಷ್ಟ್ರ ಪ್ರಜ್ಞೆಯನ್ನು ಬೆಳೆಸುವ ಕೆಲಸವಾಗಬೇಕು. ಮನಸ್ಸು ಶುದ್ದವಾಗಿರಬೇಕಾದರೆ ಕರ್ಮ ಮಾಡಬೇಕು. ಭಾರತ ಇರುವುದು ಬಡವನ ತಟ್ಟೆಯಲ್ಲಿ. ಆತ್ಮಭಲಕ್ಕಿಂತ ದೊಡ್ಡದು ಬೇರೊಂದಿಲ್ಲ. ಗಾಂಧೀಜಿಯವರು ಮೆಟ್ಟದ ನೆಲವಿಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಇಡೀ ದೇಶವನ್ನು ಸುತ್ತಿದ್ದಾರೆ. ಜಾತಿ ಜಾತಿಯನ್ನು ಒಂದು ಮಾಡಿದ್ದಾರೆ ಎಂದರು.
ನಮ್ಮ ದೇಶದ ಸ್ವಾತಂತ್ರ ಚಳವಳಿಯ ಇತಿಹಾಸವನ್ನು ನಾವೆಲ್ಲರೂ ತಿಳಿದಿರಬೇಕಾಗಿದೆ. ಇತಿಹಾಸವನ್ನು ತಿಳಿದುಕೊಳ್ಳುವ ಅನಿವಾರ್ಯತೆ ನಮಗಿದೆ. ಇತಿಹಾಸ ತಿಳಿದವನು ಭವಿಷತ್ತನ್ನು ರೂಪಿಸ ಬಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈರವರು ಹೇಳಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರವರು ಮಾತನಾಡಿ ಕೆಪಿಸಿಸಿಯ ನಿರ್ದೇಶಣದಂತೆ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮ ರಾಜ್ಯದ್ಯಾಂತ ಆಯೋಜನೆ ಮಾಡಲಾಗಿದೆ. ಅಸಂಖ್ಯಾತ ಕಾರ್ಯಕರ್ತರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದರು.
ವಿಧಾನಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿರವರು ಮಾತನಾಡಿ ಸ್ವಾತಂತ್ರ್ಯದ ಮಹತ್ವವನ್ನು ತಿಳಿಯಲು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಸಿಕ್ಕಿದ ಬಳಿಕದ ದಿನಗಳ ಬಗ್ಗೆ ನಾವು ತಿಳಿದಿರಬೇಕು ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಇದೊಂದು ಅವಿಸ್ಮರಣೀಯ ಕ್ಷಣ. ಗುಪ್ತವಾಗಿ ನಮ್ಮೊಟ್ಟಿಗೆ ಬಹಳಷ್ಟು ಜನ ಇದ್ದಾರೆ. ಸ್ವಾತಂತ್ರವನ್ನು ಉಳಿಸಿಕೊಳ್ಳುವಲ್ಲಿ ನಾವೆಲ್ಲರು ಪಣತೊಡಬೇಕು. ಶಾಂತಿ ಸೌಹಾರ್ದತೆ ಭಾರತದಲ್ಲಿ ಶಾಶ್ವತವಾಗಿ ಉಳಿಯಬೇಕು ಜಾತ್ಯಾತೀತ ಭಾರತ ವಿಶ್ವದಲ್ಲಿ ಮಾನ್ಯತೆ ಪಡೆಯಬೇಕು. ಈ ಹುರುಪು ಉತ್ಸಾಹ ಸದಾ ನಮ್ಮೊಂದಿಗಿರಲಿ ಎಂದರು.
ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ ಸ್ವಾಗತಿಸಿದರು. ಪಕ್ಷ ಪ್ರಮುಖರಾದ ಮುರಳೀಧರ ರೈ, ಎಂ.ಎಸ್.ಮುಹಮ್ಮದ್, ಎಂ ಬಿ ವಿಶ್ವನಾಥ ರೈ, ಪ್ರವೀಣ್ ಚಂದ್ರ ಆಳ್ವ, ಹೇಮನಾಥ ಶೆಟ್ಟಿ, ಕೌಶಲ್ ಪ್ರಸಾದ್, ಅನಿತಾ ಹೇಮನಾಥ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಕೃಪಾ ಅಮರ್ ಆಳ್ವ, ದಿವ್ಯಪ್ರಭಾ ಗೌಡ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ಮುಹಮ್ಮದ್ ಅಲಿ ಪುತ್ತೂರು, ಉಮಾನಾಥ ಶೆಟ್ಟಿ, ವಿ.ಕೆ.ಎಂ.ಅಶ್ರಫ್, ಶ್ರೀನಿವಾಸ ಶೆಟ್ಟಿ ಕೊಲ್ಯ, ಹಸೈನಾರ್ ನೆಲ್ಲಿಗುಡ್ಡೆ, ಕೆ.ಪದ್ಮನಾಭ ರೈ, ಜಿ.ಎ. ಪದ್ಮನಾಭ ಪೂಜಾರಿ ಸಣ್ಣಗುತ್ತು, ಮೋಹನ್ ಗುರ್ಜಿನಡ್ಕ, ರಾಮಣ್ಣ ಪಿಲಿಂಜ ಸಹಿತ ಹಲವರು ಉಪಸ್ಥಿತರಿದ್ದರು.




