February 4, 2026

ಮಾಣಿ: ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರ

0
IMG-20220817-WA0179

ಗ್ರಾಮೀಣ ಭಾಗಗಳಲ್ಲಿ ನಡೆಯುವ ಉಚಿತ ಆರೋಗ್ಯ ಶಿಬಿರಗಳಿಗೆ ಬಹಳ ಮಹತ್ವ ಇದೆ. ಅದರಲ್ಲಿಯೂ ಮನುಷ್ಯನ ದೇಹದ ಪ್ರಮುಖ ಭಾಗವಾಗಿರುವ ಕಣ್ಣಿನ ಶಿಬಿರಕ್ಕೆ ಅತೀವವಾದ ಬೇಡಿಕೆ ಇದೆ. ಆದ್ದರಿಂದ ಇಂದು ಆಯೋಜಿಸಿರುವ ಈ ಶಿಬಿರ ಶ್ಲಾಘನೀಯ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ಮಾಣಿ ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಬಂಟ್ವಾಳ, ಲಯನ್ಸ್ ಕ್ಲಬ್ ಮಾಣಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಇವುಗಳ ಜಂಟಿ ಆಶ್ರಯದಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಮತ್ತು ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿದ ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿದ್ಯಾಭಿವರ್ಧಕ ಸಂಘ(ರಿ) ಮಾಣಿ ಇದರ ಅಧ್ಯಕ್ಷ ರೋ.ಕಿರಣ್ ಹೆಗ್ಡೆಯವರು ಮಾತನಾಡಿ, ಉಚಿತ ಶಿಬಿರಗಳಲ್ಲಿ ಸಿಗುವ ಸೌಲಭ್ಯಗಳನ್ನು ಜನಸಾಮಾನ್ಯರು ಪಡೆದುಕೊಳ್ಳುವ ಅಗತ್ಯ ಇದೆ. ಮತ್ತು ಅಂಧತ್ವ ನಿವಾರಣೆಯ ಬಗ್ಗೆ ಗ್ರಾಮೀಣ ಭಾಗಗಳಲ್ಲಿ ಮಾಹಿತಿ ನೀಡುವ ಅನಿವಾರ್ಯತೆ ಕೂಡಾ ಇದೆ ಎಂದು ಹೇಳಿದರು.
ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾರವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ವೆನ್ಲಾಕ್ ಆಸ್ಪತ್ರೆಯ ಆರೋಗ್ಯ ವಿಭಾಗದ ಸಂಯೋಜಕಿ ಪದ್ಮಲತಾ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿದರು.
ವೆನ್ಲಾಕ್ ಆಸ್ಪತ್ರೆಯ ಡಾ.ಅನಿಲ್, ಶಿಬಿರದ ಸಂಯೋಜಕ ಡಾ.ಮನೋಹರ ರೈ, ಮಾಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರಾದ ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ರಮಣಿ.ಡಿ.ಪೂಜಾರಿ, ಮಾಣಿ ಲಯನ್ಸ್ ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಲ.ಗಂಗಾಧರ ರೈ, ಪೂರ್ವಾಧ್ಯಕರಾದ ಲ.ಬಾಲಕೃಷ್ಣ ಶೆಟ್ಟಿ, ಡಾ.ಶ್ರೀನಾಥ್ ಆಳ್ವ, ಉಪಾಧ್ಯಕ್ಷ ಲ.ಅಕ್ಷಯ್ ಹೆಗ್ಡೆ, ಕೋಶಾಧಿಕಾರಿ ಲ.ಕೂಸಪ್ಪ ಪೂಜಾರಿ, ಸದಸ್ಯ ಲ.ಬಿ.ಯಂ.ಗಂಗಾಧರ ರೈ ಮತ್ತಿತರರು ಉಪಸ್ಥಿತರಿದ್ದರು.
ನೇತ್ರಾಧಿಕಾರಿ ಡಾ.ಶಾಂತರಾಜ್ ಸ್ವಾಗತಿಸಿದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರೋ.ಪುಷ್ಪರಾಜ ಹೆಗ್ಡೆ ವಂದಿಸಿದರು. ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಉಮೇಶ್.ಪಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 183 ಮಂದಿ ಶಿಬಿರಾರ್ಥಿಗಳ ನೋಂದಾವಣಿಯಾಗಿದ್ದು, 127 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. 15 ಮಂದಿ ಫಲಾನುಭವಿಗಳನ್ನು ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!