ಫಾಝಿಲ್ ಹತ್ಯೆ ಪ್ರಕರಣ:
ರೌಡಿಶೀಟರ್ ಸುಹಾಸ್ ಶೆಟ್ಟಿ ತಂಡದ ಕೈವಾಡ
ಸುರತ್ಕಲ್: ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್ ಫಾಝಿಲ್ ಹತ್ಯೆ ಹಿಂದೆ ರೌಡಿಶೀಟರ್ ಸುಹಾಸ್ ಶೆಟ್ಟಿ ತಂಡದ ಕೈವಾಡ ಇರುವ ಬಗ್ಗೆ ಪೊಲೀಸರಿಗೆ ಖಚಿತ ಸುಳಿವು ಸಿಕ್ಕಿದೆ. ಪೊಲೀಸರು ಈ ಗ್ಯಾಂಗ್ ಸದಸ್ಯರ ಬೆನ್ನು ಹತ್ತಿದ್ದಾರೆ.
ರೌಡಿಶೀಟರ್ ಸುಹಾಸ್ ಶೆಟ್ಟಿ ತಂಡವು ಬಜ್ಪೆಯಲ್ಲಿ ನಡೆದ ಕೊಲೆ ಕೃತ್ಯದಲ್ಲಿ ಹಾಗೂ ಇನ್ನೊಂದು ಕೊಲೆ ಕೃತ್ಯದಲ್ಲಿ ಈ ಹಿಂದೆ ಭಾಗಿಯಾಗಿತ್ತು. ಆ ತಂಡದ ಸದಸ್ಯರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕಿದ್ದು, ಕೆಲವರನ್ನು ವಶಕ್ಕೂ ಪಡೆದಿದ್ದಾರೆ.
ಕೃತ್ಯಕ್ಕೆ ಬಳಸಿದ ಕಾರನ್ನು ಬಾಡಿಗೆಗೆ ನೀಡಿದ್ದ ಅರೋಪಿ ಅಜಿತ್ ಕ್ರಾಸ್ತಾನನ್ನು ಪೊಲೀಸರು ಭಾನುವಾರ ಬಂಧಿಸಿದ್ದರು. ಕೃತ್ಯಕ್ಕೆ ಬಳಸಿದ್ದ ಕಾರು ಉಡುಪಿ ಜಿಲ್ಲೆಯ ಇನ್ನಾ ಗ್ರಾಮದ ಕಡೆಕುಂಜದಲ್ಲಿ ಭಾನುವಾರ ಪತ್ತೆಯಾಗಿತ್ತು. ಬಂಧಿತ ಆರೋಪಿ ನೀಡಿದ ಸುಳಿವಿನ ಆಧಾರದಲ್ಲಿ ಪೊಲೀಸರು ಸುಹಾಸ್ ಶೆಟ್ಟಿ ಗ್ಯಾಂಗ್ ಬೆನ್ನು ಹತ್ತಿತ್ತು.




