ಕಳಂಜ ಮಸೂದ್ ಕೊಲೆ ಪ್ರಕರಣ: ಮೃತ ಮಸೂದ್ ಕುಟುಂಬಕ್ಕೆ ತನ್ನ ಎರಡು ತಿಂಗಳ ಗೌರವಧನ ನೀಡುವುದಾಗಿ ಘೋಷಿಸಿ ಮಾದರಿಯಾದ ಪುತ್ತೂರು ನಗರಸಭೆ ಸದಸ್ಯ ರಿಯಾಝ್ ಪರ್ಲಡ್ಕ
ಸುಳ್ಯ: ಬೆಳ್ಳಾರೆ ಕಳಂಜದ ದಿನಗೂಲಿ ಕೆಲಸ ಮಾಡುತ್ತಾ ಕುಟುಂಬ ಸಾಕುತ್ತಿದ್ದ ಅಮಾಯಕ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅಮಾನುಷವಾಗಿ ಕೊಲೆಗೈದ ಘಟನೆಯನ್ನು ಪುತ್ತೂರು ನಗರಸಭಾ ಸದಸ್ಯ, ಯುವ ಮುಖಂಡ ಮೊಹಮ್ಮದ್ ರಿಯಾಝ್ ಪರ್ಲಡ್ಕ ಅವರು ತೀವ್ರವಾಗಿ ಖಂಡಿಸಿದರು.
ಅಲ್ಲದೆ ಈ ಬಗ್ಗೆ ಪೋಲಿಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ನೈಜ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ರಾಜ್ಯ ಸರಕಾರವು ತಾರತಮ್ಯ ನೀತಿ ತಾಳದೆ ತಕ್ಷಣದಲ್ಲೇ ಮೃತ ಯುವಕನ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ಮೊತ್ತವನ್ನು ಘೋಷಿಸಿ ಜಿಲ್ಲೆಯ ಶಾಂತಿಗೆ ಭಂಗ ಬರದಂತೆ ನೋಡಿಕೊಳ್ಳಬೇಕು ಎಂದು ಗೃಹ ಇಲಾಖೆಯನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೃತ ಮಸೂದ್ ಕುಟುಂಬಕ್ಕೆ ತನ್ನ ಎರಡು ತಿಂಗಳ ಗೌರವಧನವನ್ನು ನೀಡುವುದಾಗಿ ಘೋಷಿಸಿ ಮಾದರಿಯಾದರು. ಈ ಹಿಂದೆಯೂ ರಿಯಾಝ್ ಅವರು ಇದೇ ರೀತಿ ತನ್ನ ಗೌರವಧನವನ್ನು ಅನ್ಯಾಯಕ್ಕೊಳಗಾದ ಹಲವು ಕುಟುಂಬಗಳಿಗೆ ವಿತರಿಸಿ ಮಾನವೀಯತೆ ಮೆರೆದಿದ್ದರು.




