ಸುಳ್ಯ: ಗುಂಪು ಹಲ್ಲೆಗೊಳಗಾಗಿ ಹತ್ಯೆಯಾದ ಯುವಕನ ಕುಟುಂಬದ ಪರಿಹಾರಕ್ಕೆ ಮುಖಂಡರ ಪಟ್ಟು: ಆಸ್ಪತ್ರೆಯ ಬಿಲ್ಲು ಪಾವತಿಗೆ ಜಿಲ್ಲಾ ಆಡಳಿತ ಒಪ್ಪಿಗೆ
ಮಂಗಳೂರು: ಸುಳ್ಯ ಕಳಂಜ ಗ್ರಾಮದ ವಿಷ್ಣುನಗರದಲ್ಲಿ 8 ಮಂದಿಯಿಂದ ಹಲ್ಲೆಗೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಮಸೂದ್ ಕುಟುಂಬಕ್ಕೆ ಪರಿಹಾರ ನೀಡಲು ಮುಸ್ಲಿಂ ಮುಖಂಡರು ಪಟ್ಟು ಹಿಡಿದು ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಒಪ್ಪಿಕೊಂಡಿದೆ.


ಬಳಿಕ ಚಿಕಿತ್ಸೆಗೆ ಬಳಸಿದ ಮೊತ್ತವನ್ನು ಜಿಲ್ಲಾಡಳಿತ ನೀಡುವ ಭರವಸೆ ನೀಡಿದ ಬಳಿಕ ಪಟ್ಟು ಸಡಿಲಿಸಿದ ಘಟನೆ ತಿಳಿದು ಬಂದಿದೆ.
ಹಲ್ಲೆಗೊಳಗಾಗಿ ಸಾವನ್ನಪ್ಪಿರುವ ಮಸೂದ್ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ತೆಗೆಯಬೇಕಾದರೆ ಸರಕಾರ 25 ಲಕ್ಷ ರೂ. ಪರಿಹಾರ ನೀಡಬೇಕು, ಆಸ್ಪತ್ರೆಯ ಬಿಲ್ಲನ್ನು ಸರಕಾರವೇ ಪಾವತಿಸಬೇಕು, ಸ್ವತಃ ಜಿಲ್ಲಾಧಿಕಾರಿಗಳೇ ಆಸ್ಪತ್ರೆಗೆ ಬಂದು ಭರವಸೆ ನೀಡಬೇಕು ಎಂದು ಮುಸ್ಲಿಮ್ ಒಕ್ಕೂಟದ ಮುಖಂಡರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಜಿಲ್ಲಾಧಿಕಾರಿಗಳು ಮಂಗಳೂರು ತಹಶೀಲ್ದಾರ್ ರನ್ನು ಮಾತುಕತೆಗಾಗಿ ಆಸ್ಪತ್ರೆ ಕಳುಹಿಸಿದರು. ಜತೆಗೆ ಮಂಗಳೂರಿನ ಪೊಲೀಸ್ ಕಮಿಷನರ್ ಡಾ। ಶಶಿಕುಮಾರ್ ಮತ್ತಿತರ ಅಧಿಕಾರಿಗಳು ಆಸ್ಪತ್ರೆಗೆ ಬಂದು ಅಲ್ಲಿ ಮಾತುಕತೆ ನಡೆದ ಸಂದರ್ಭ ಮೃತರ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂ. ಪರಿಹಾರವನ್ನು ಸರಕಾರ ನೀಡಬೇಕು ಎಂಬ ಬೇಡಿಕೆಯನ್ನು ಮುಸ್ಲಿಮ್ ಒಕ್ಕೂಟದ ಮುಖಂಡರು ಮುಂದಿಟ್ಟರು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಫೋನ್ ಮೂಲಕ ಚರ್ಚೆ ನಡೆಸಿದ ತಹಶೀಲ್ದಾರ್ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಶಿಫಾರಸು ಮಾಡಲು ಒಪ್ಪಿರುವುದಾಗಿ ಹೇಳಿದರೆನ್ನಲಾಗಿದೆ.
ತಮ್ಮ ಬೇಡಿಕೆಗಳಿಗೆ ಜಿಲ್ಲಾಡಳಿತ ಹಿನ್ನಲೆಯಲ್ಲಿ ಮಸೂದ್ ಮೃತ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಲು ಅವರ ಕುಟುಂಬಿಕರು ಮತ್ತು ಸಮಾಜ ಬಾಂಧವರು ಒಪ್ಪಿದರು. ಅದರಂತೆ ಇದೀಗ ಮೃತದೇಹದ ಮರಣೋತ್ತರ ಶವ ಪರೀಕ್ಷೆ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಈ ಮಾತುಕತೆಯಲ್ಲಿ ಮಂಗಳೂರು ಶಾಸಕ ಯು.ಟಿ. ಖಾದರ್, ಸುಳ್ಯದ ಮುಸ್ಲಿಂ ಮುಖಂಡರುಗಳಾದ ಕೆ.ಎಂ.ಮುಸ್ತಫಾ, ಇಕ್ಬಾಲ್ ಬೆಳ್ಳಾರೆ, ಜಾಬಿರ್ ಅರಿಯಡ್ಕ, ಸುಹೈಲ್ ಕಂದಕ್, ಶಾಹುಲ್ ಹಮೀದ್, ಅಬ್ದುಲ್ ಗಫೂರ್ ಕಲ್ಮಡ್ಕ, ಇಸ್ಮಾಯಿಲ್ ಪಡ್ಪಿನಂಗಡಿ ಮೊದಲಾದ ಹಲವು ಮಂದಿ ಇದ್ದರೆಂದು ತಿಳಿದುಬಂದಿದೆ.
ಬೆಳ್ಳಾರೆಯಲ್ಲಿ ಅಂತ್ಯಸಂಸ್ಕಾರ:
ಮಸೂದೆ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಸಂಸ್ಕಾರಕ್ಕಾಗಿ ದೇಹವನ್ನು ಬೆಳ್ಳಾರೆಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.




