ವಿಟ್ಲ: ಬಜರಂಗದಳದ ಮುಖಂಡನ ಮೇಲೆ ಹಲ್ಲೆ ಪ್ರಕರಣ:
ಗಿರೀಶ್ ಮತ್ತು ಪ್ರಶಾಂತ್ ತಂಡದಿಂದ ಕೃತ್ಯ ಶಂಕೆ
ವಿಟ್ಲ: ವೈಯಕ್ತಿಕ ವಿಚಾರದಲ್ಲಿ ಸಂಘಟನೆಯ ಒಳಗೆ ತಂಡಗಳ ನಡುವೆ ಸಾಲೆತ್ತೂರಿನ ಅಗರಿಯಲ್ಲಿ ಮಾರಾಮಾರಿ ನಡೆದು ಮಾರಕಾಯುಧ ದಾಳಿಗೆ ಇಬ್ಬರು ಗಾಯಗೊಂಡ ಘಟನೆ ಸಂಬಂಧಿಸಿದಂತೆ ತಮ್ಮದೇ ಸಂಘಟನೆಯ ಕಾರ್ಯಕರ್ತರು ಈ ಕೃತ್ಯ ಎಸೆಗಿದ್ದಾರೆಂದು ತಿಳಿದು ಬಂದಿದೆ.
ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚಂದ್ರಹಾಸ ಕನ್ಯಾನ ಹಾಗೂ ಸುರತ್ಕಲ್ ಕೃಷ್ಣಾಪುರ ನಿವಾಸಿ ಪ್ರಶಾಂತ್ ಎಂಬವರಿಗೆ ಗಾಯಗಳಾಗಿದೆ.
ಅಡ್ಯನಡ್ಕ ನಿವಾಸಿ ಗಿರೀಶ್, ಪ್ರಶಾಂತ್ ಸುರತ್ಕಲ್ ಸೇರಿ ಸುಮಾರು 12 ತಂಡ ಸಾಲೆತ್ತೂರಿನಲ್ಲಿ ಬಂದು ನಾಗೇಶ್ ಸಾಲೆತ್ತೂರು ಅವರಲ್ಲಿ ಚಂದ್ರಹಾಸ ಕನ್ಯಾನ ಜತೆಗೆ ಸೇರಬಾರದೆಂದು ಹೇಳಿದ್ದು, ಬಳಿಕ ಬೈಠಕ್ ಹೋಗುವ ನಿಟ್ಟಿನಲ್ಲಿ ಚಂದ್ರಹಾಸ ಕನ್ಯಾನ ನಾಗೇಶ್ ಸಾಲೆತ್ತೂರು ಅವರ ಮನೆಗೆ ಬರುತ್ತಿದ್ದ ಸಮಯ ಈ ದಾಳಿ ನಡೆದಿದೆ ಎನ್ನಲಾಗಿದೆ.
ಚಂದ್ರಹಾಸ ಕನ್ಯಾನ ಅವರ ತಲೆಗೆ ಏಟಾಗಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಶಾಂತ್ ಸುರತ್ಕರ್ ಬೆನ್ನಿಗೆ ಏಟಾಗಿದ್ದು, ಮಂಗಳೂರು ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಂಡಗಳ ನಡುವಿನ ದ್ವೇಷ ಎಂದು ಹೇಳಲಾಗುತ್ತಿದೆಯಾದರೂ, ಹಣದ ವಿಚಾರದಲ್ಲಿ ಈ ದಾಳಿ ನಡೆದಿದೆ ಎಂಬ ಮಾಹಿತಿಯಿದೆ. ವಿಟ್ಲ ಪೊಲೀಸರಿಂದ ತನಿಖೆ ನಡೆಯುತ್ತಿದೆ.




