ಬೆಳೆ ಕಾವಲಿಗೆಂದು ಜಮೀನಿನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ: ಓರ್ವ ಮೃತ್ಯು, ಮತ್ತೋರ್ವ ಗಂಭೀರ
ಗುಂಡ್ಲುಪೇಟೆ: ಬೆಳೆ ಕಾವಲಿಗೆಂದು ಜಮೀನಿನಲ್ಲಿ ಮಲಗಿದ್ದ ವೇಳೆ ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊರ್ವ ಮೃತಪಟ್ಟಿದ್ದು, ಆತನ ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಶಿವಪುರ ಗ್ರಾಮದ ನಿವಾಸಿ ಬೆಳ್ಳಶೆಟ್ಟಿ(55) ಮೃತ ವ್ಯಕ್ತಿಯಾಗಿದ್ದು, ಇವರ ಮಗ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳೆ ರಕ್ಷಣೆ ಮಾಡುವ ಸಲುವಾಗಿ ಜಮೀನಿನಲ್ಲಿ ಕಾವಲು ಕಾಯುವಾಗ ಬೆಳಗಿನ ಜಾವ ದಿಢೀರನೆ ಆನೆಯೊಂದು ದಾಳಿ ನಡೆಸಿದೆ. ದಾಳಿ ಪರಿಣಾಮ ಬೆಳ್ಳಶೆಟ್ಟಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ 112 ಪೊಲೀಸ್ ಸಿಬ್ಬಂದಿ ದೌಡಾಯಿಸಿ ಗಾಯಾಳು ಮಹೇಶ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದು, ಪರಿಹಾರದ ಭರವಸೆ ನೀಡಿದ್ದಾರೆ.




