ಸಂಘಪರಿವಾರದ ಮುಖಂಡ ಯಶ್ಪಾಲ್ಗೆ ಕೊಲೆ ಬೆದರಿಕೆ ಕರೆ:
ಪೊಲೀಸ್ ಇಲಾಖೆಯಿಂದ ಗನ್ಮ್ಯಾನ್
ಉಡುಪಿ: ಸಂಘಪರಿವಾರದ ಮುಖಂಡ ಹಾಗೂ ಉಡುಪಿಯ ಸರಕಾರಿ ಮಹಿಳಾ ಪಿಯು ಕಾಲೇಜು ಉಪಾಧ್ಯಕ್ಷ ಯಶ್ಪಾಲ್ ಎ. ಸುವರ್ಣಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ ಗನ್ಮ್ಯಾನ್ ನೀಡಲಾಗಿದೆ.
ಗನ್ಮ್ಯಾನ್ ಪಡೆದುಕೊಳ್ಳುವಂತೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರು ಸಲಹೆ ನೀಡಿದ್ದು, ಅದರಂತೆ ಯಶಪಾಲ್ ಅವರಿಗೆ ಪೊಲೀಸ್ ಗನ್ಮ್ಯಾನ್ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯಶ್ಪಾಲ್, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಗನ್ಮ್ಯಾನ್ ನೀಡಿರುವುದು ಸ್ವಾಗತಾರ್ಹ. ಗನ್ಮ್ಯಾನ್ ಅನ್ನು ಮುಂದುವರಿಸುವ ಬಗ್ಗೆ ಪಕ್ಷದ ಹಿರಿಯರ ಅಭಿಪ್ರಾಯ ಪಡೆಯುತ್ತೇನೆ ಎಂದರು.
ಇನ್ನು ಯಶ್ಪಾಲ್ ಅವರಿಗೆ ಈಗಾಗಲೇ ಮೂರಕ್ಕೂ ಅಧಿಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳನ್ನು ಹಾಕಲಾಗಿದ್ದು, ಅವರಿಗೆ ಭದ್ರತೆ ಒದಗಿಸುವಂತೆ ಹಿಂದೂ ಮುಖಂಡರು ಪೊಲೀಸ್ ಇಲಾಖೆಗೆ ಮನವಿಯನ್ನೂ ಸಲ್ಲಿಸಿದ್ದರು.




