ಮದ್ರಸಾಗಳನ್ನು ಶಿಕ್ಷಣ ಪದ್ಧತಿಯಲ್ಲಿ ತರುವ ಪ್ರಯತ್ನ ಮಾಡುತ್ತೇವೆ: ಶಿಕ್ಷಣ ಸಚಿವ ಬಿ.ಸಿ ನಾಗೇಶ್
ಕಾರವಾರ: ಮದ್ರಸಾಗಳನ್ನು ಶಿಕ್ಷಣ ಪದ್ಧತಿಯಲ್ಲಿ ತರುವ ಪ್ರಯತ್ನ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಉತ್ತರಕನ್ನಡ ಜಿಲ್ಲೆಯಲ್ಲಿ ಹೇಳಿದರು.
ಕುಮಟಾ ತಾಲೂಕಿನ ಗೋಕರ್ಣದ ವಿಷ್ಣುಪೀಠ ವಿದ್ಯಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮದರಸಾ ಶಿಕ್ಷಣದಿಂದಾಗಿ ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣ ಪದ್ಧತಿಯಿಂದ ದೂರ ಉಳಿಯಬಾರದು. ಅವರು ಸಹ ನಮ್ಮ ಎಲ್ಲಾ ಮಕ್ಕಳಂತೆ ಈ ಶಿಕ್ಷಣ ಪದ್ಧತಿಗೆ ಬರಬೇಕು ಎನ್ನುವ ಕಾರಣದಿಂದ ಮುಂದಿನ ದಿನದಲ್ಲಿ ಈ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ತಿಳಿಸಿದರು.
ಈ ಬಗ್ಗೆ ಅಲ್ಪಸಂಖ್ಯಾತ ನಾಯಕರ ಗಮನಕ್ಕೂ ಬಂದಿದೆ. ಮದರಸಾಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗಿ ನಮ್ಮ ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಇವತ್ತಿನ ಪ್ರಪಂಚದಲ್ಲಿ ಬದುಕುವುದಾದರೇ ಈ ಶಿಕ್ಷಣ ಪದ್ಧತಿ ಬೇಕು. ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಒಂದಷ್ಟು ಅವಕಾಶ ಮಾಡಿಕೊಟ್ಟಿದ್ದೇವೆ. ಆ ಪ್ರಕಾರವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರು.




